ಸಂಸದೆ ಶೋಭಾ ಕರಂದ್ಲಾಜೆ, ನಟ ದರ್ಶನ್ ವಿರುದ್ಧ ಹೈಕೋರ್ಟ್ ಗೆ ದೂರು
ಬೆಂಗಳೂರು, ಜು.22: ಸಂಸದೆ ಶೋಭಾ ಕರಂದ್ಲಾಜೆ, ನಟ ದರ್ಶನ್ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ಕೊಟ್ಟ ವೇಳೆ ಕೇಂದ್ರ ಸರಕಾರ ಕೊರೋನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ವಕೀಲೆ ಗೀತಾ ಮಿಶ್ರಾ ಹೈಕೋರ್ಟ್ ಗೆ ದೂರು ಸಲ್ಲಿಸಿದ್ದಾರೆ.
ಮಾರ್ಗಸೂಚಿ ಉಲ್ಲಂಘಿಸಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿರುವವರಲ್ಲಿ ಅಬಕಾರಿ ಸಚಿವ ನಾಗೇಶ್, ಶಾಸಕ ಎಮ್.ಕೆ.ಸೋಮಶೇಖರ್ ಸೇರಿ ಇನ್ನಿತರ ಮುಖಂಡರು ಇದ್ದಾರೆ ಎಂದು ಹೈಕೋರ್ಟ್ ಗೆ ವಕೀಲೆ ಮಿಶ್ರಾ ಅವರು ಜ್ಞಾಪಕ ಪತ್ರ ಸಲ್ಲಿಸಿದ್ದಾರೆ.
ದೇವಸ್ಥಾನಕ್ಕೆ ಭೇಟಿ ಕೊಟ್ಟಾಗ ಸುರಕ್ಷಿತ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದೇ, ಕೇಂದ್ರ ಸರಕಾರದ ಎಸ್ಓಪಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ. ಅಂತೆಯೇ ಅಬಕಾರಿ ಸಚಿವ ನಾಗೇಶ್ ತಮ್ಮ ಕಾರ್ಯಕರ್ತರ ಅಂಗಡಿ ಮಳಿಗೆ ಉದ್ಘಾಟಿಸಿ ಅವರ ಜೊತೆ ಸೇರಿ ಪಾರ್ಟಿ ಮಾಡಿದ್ದಾರೆ. ಈ ವೇಳೆ ಮಾಸ್ಕ್ ಧರಿಸಿಲ್ಲ ಮತ್ತು ಸುರಕ್ಷಿತ ಅಂತರ ಕಾಪಾಡಿಕೊಂಡಿಲ್ಲ ಎಂದು ದೂರಿದ್ದಾರೆ.
ಕಾನೂನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸುವ ಜನಪ್ರತಿನಿಧಿಗಳೆ ಕಾನೂನು ಉಲ್ಲಂಘಿಸುತ್ತಿದ್ದಾರೆ. ಜನ ಸಾಮಾನ್ಯರಿಗೊಂದು ನಿಯಮ ಪ್ರಭಾವಿಗಳಿಗೊಂದು ನಿಯಮ ಎಂಬಂತೆ ಭಾವಿಸಿದ್ದಾರೆ. ಹೀಗಾಗಿ ಇವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ ನಿಯಮಗಳ ಅನುಸಾರ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.