ಸಂಸದ ಅನಂತಕುಮಾರ್ ಹೆಗಡೆ ಕಾರಿಗೆ ಮುತ್ತಿಗೆ ಹಾಕಿ ರೈತರ ಪ್ರತಿಭಟನೆ
ಬೆಳಗಾವಿ, ಆ.18: ಚನ್ನಮ್ಮನ ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿ ಬಳಿ ಸಂಸದ ಅನಂತಕುಮಾರ್ ಹೆಗಡೆ ಪ್ರಮಾಣಿಸುತ್ತಿದ್ದ ವಾಹನಕ್ಕೆ ರೈತರು ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ತಾಲೂಕಿನ ಎಂ.ಕೆ. ಹುಬ್ಬಳ್ಳಿಯ ಗಂಗಾಂಬಿಕೆ ಐಕ್ಯಮಂಟಪದ ಬಳಿ ಮಲಪ್ರಭಾ ನದಿಯಿಂದ ವಿವಿಧ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಚಾಲನೆ ನೀಡಿ ಮಂಗಳವಾರ ತೆರಳುತ್ತಿದ್ದ ಸಂಸದ ಅನಂತಕುಮಾರ್ ಹೆಗಡೆ ಹಾಗೂ ಶಾಸಕ ಮಹಾಂತೇಶ ದೊಡ್ಡಗೌಡರ ಪ್ರಯಾಣಿಸುತ್ತಿದ್ದ ಕಾರಿಗೆ ರೈತರು ಮುತ್ತಿಗೆ ಹಾಕಿ, ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಮೊದಲು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ಸಂಸದರ ಬಳಿ ಮಾತನಾಡಲು ಮುಂದಾದರು. ಆದರೆ ಈ ಸಂದರ್ಭದಲ್ಲಿ ಸಂಸದರಾಗಲಿ ಶಾಸಕರಾಗಲಿ ವಾಹನದಿಂದ ಇಳಿಯಲು ನಿರಾಕರಿಸಿದರು. ಇದರಿಂದ ಆಕ್ರೋಶಿತರಾದ ರೈತ ಸಂಘಟನೆ ಕಾರ್ಯಕರ್ತರು ವಾಹನಕ್ಕೆ ಮುತ್ತಿಗೆ ಹಾಕಿದರು. ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿ ದಾರಿ ಮಾಡಿಕೊಟ್ಟ ನಂತರ ವಾಹನ ತೆರಳಿತು.
ಜನಪ್ರತಿನಿಧಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದ ಸಂಘಟನೆಯ ಕಾರ್ಯಕರ್ತರು ಅವರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಅಲ್ಲದೆ, ಜನರ ಸಂಕಷ್ಟಗಳಿಗೆ ಸ್ಪಂದಿಸದ ಸಂಸದರಿಗೆ ಸರಿಯಾದ ಬುದ್ಧಿ ಕಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘಟನೆ ಉತ್ತರ ಕರ್ನಾಟಕ ಘಟಕದ ಗೌರವ ಅಧ್ಯಕ್ಷ ಶಶಿಕಾಂತ ಪಡಸಲಗಿ ಮಾತನಾಡಿ, ಹಸಿರು ಶಾಲು ಹಾಕಿಕೊಂಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಬಿ.ಎಸ್. ಯಡಿಯೂರಪ್ಪ ರೈತರಿಗೆ ಮರಣ ಶಾಸನ ತರಲು ಹೊರಟಿದ್ದಾರೆ. ಎಪಿಎಂಸಿ ಕಾಯ್ದೆ ತಿದ್ದುಪಡಿ, ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಕೃಷಿಕರ ಬದುಕಿಗೆ ಮಾರಕವಾಗಿವೆ. ನೆರೆ ಬಂದು ಮನೆ ಕಳೆದುಕೊಂಡ ಕುಟುಂಬಗಳಿಗೆ ಇನ್ನೂ ಸರಿಯಾಗಿ ಪರಿಹಾರ ಕೊಟ್ಟಿಲ್ಲ ಎಂದು ದೂರಿದರು.
ಮುಂದೆ ಗ್ರಾಮ ಪಂಚಾಯತ್ ಚುನಾವಣೆ ಬರಲಿವೆ. ಈ ವೇಳೆಯೇ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಎಸೆಸೆಲ್ಸಿ ಕನಿಷ್ಠ ವಿದ್ಯಾರ್ಥತೆ ಪಡೆದಿರಬೇಕೆಂದು ನಿಗದಿ ಮಾಡಲಿ. ಅದೇ ರೀತಿ, ವಿಧಾನಸಭೆಗೆ ಪದವಿ, ಲೋಕಸಭೆಗೆ ಪಿಎಚ್.ಡಿ ಪದವಿ ವಿದ್ಯಾರ್ಹತೆ ನಿಗದಿಪಡಿಸಬೇಕು. ಆ ಮಾತ್ರ ಈಗಿರುವ ರಾಜಕಾರಣಿಗಳು ಅಧಿಕಾರದಿಂದ ಹೊರಗೆ ಉಳಿಯುತ್ತಾರೆ. ಜನರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.