ಮುಖ್ಯಮಂತ್ರಿ ವಿರುದ್ಧ ಮತ್ತೊಮ್ಮೆ ಅಸಮಾಧಾನ ಹೊರಹಾಕಿದ ಬಿಜೆಪಿ ಶಾಸಕ ಯತ್ನಾಳ್
ವಿಜಯಪುರ, ಆ.26: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪುನಃ ಅಸಮಾಧಾನ ಹೊರ ಹಾಕಿದ್ದಾರೆ.
ಬುಧವಾರ ಜಿಲ್ಲಾ ಪಂಚಾಯತ್ ಸಂಭಾಂಗಣದಲ್ಲಿ ಸಚಿವ ಆರ್.ಅಶೋಕ್ ನೇತ್ವತೃದಲ್ಲಿ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ವಿಜಯಪುರ ಮಹಾನಗರ ಪಾಲಿಕೆಯ ಅಭಿವೃದ್ಧಿ ಕಾಮಗಾರಿಗಳಿಗೆ ಹಿಂದಿನ ಮುಖ್ಯಮಂತ್ರಿ ಮಂಜೂರು ಮಾಡಿದ್ದ 127 ಕೋಟಿ ರೂ.ಗಳನ್ನು ಕೋವಿಡ್ ಹೆಸರಿನಲ್ಲಿ ಹಾಲಿ ಮುಖ್ಯಮಂತ್ರಿ(ಬಿ.ಎಸ್.ಯಡಿಯೂರಪ್ಪ) ಹಿಂಪಡೆದಿದ್ದಾರೆ ಎಂದು ಯಡಿಯೂರಪ್ಪ ಹೆಸರು ಉಲ್ಲೇಖಿಸದೆ ಆಕ್ರೋಶ ವ್ಯಕ್ತಪಡಿಸಿದರು.
ಯತ್ನಾಳ್ ಆರೋಪಗಳನ್ನು ಕೇಳಿದ ಕಂದಾಯ ಸಚಿವ ಅಶೋಕ್, ಯಾವ ಕಾರಣಕ್ಕಾಗಿ ಅನುದಾನ ಹಿಂಪಡೆಯಲಾಗಿದೆ ಎಂಬುದರ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಪರಿಶೀಲಿಸುತ್ತೇನೆ ಎಂದರು.
ಯಡಿಯೂರಪ್ಪ ವಿರುದ್ಧ ಅಸಮಾಧಾನ ಹೊಂದಿರುವ ಯತ್ನಾಳ್ ಇತ್ತೀಚೆಗೆ ಪದೇ ಪದೇ ಅವರಿಗೆ ಮುಜುಗರ ತರುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಿನ್ನೆಯಷ್ಟೆ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ವೈಮಾನಿಕ ಸಮೀಕ್ಷೆ ನಡೆಸಿ, ಶಾಸಕರ ಸಭೆ ನಡೆಸಿದಾಗಲೂ ಯತ್ನಾಳ್ ಗೈರು ಹಾಜರಾಗಿದ್ದರು. ಇಂದು ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ, ಕಂದಾಯ ಸಚಿವರ ಎದುರು ಮುಖ್ಯಮಂತ್ರಿ ಮೇಲಿನ ಮುನಿಸು ಹೊರ ಹಾಕಿದರು.