ಆನ್ಲೈನ್ ಕ್ಲಾಸ್ ನೋಡುತ್ತಿದ್ದಾಗ ಕುತ್ತಿಗೆಗೆ ಜೋಳಿಗೆ ಬಿಗಿದು ವಿದ್ಯಾರ್ಥಿ ಮೃತ್ಯು
ಬೆಂಗಳೂರು, ಆ.28: ಆನ್ಲೈನ್ ಪಾಠ ಕೇಳುತ್ತಿದ್ದ 5ನೇ ತರಗತಿ ವಿದ್ಯಾರ್ಥಿಯೊಬ್ಬ, ಮನೆಯೊಳಗೆ ಸೀರೆ ಕಟ್ಟಿರುವ ಜೋಳಿಗೆಯಲ್ಲಿ ಕುಳಿತು ಏಕಾಏಕಿ ಜಾರಿದ ಪರಿಣಾಮ ಉರುಳು ಕುತ್ತಿಗೆಗೆ ಸಿಲುಕಿ ಮೃತಪಟ್ಟಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರ್ಗಾಜೋಗಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಮಂಜುನಾಥ್ ಅವರ ಪುತ್ರ ವಿಶ್ವಾಸ್(10)ಮೃತ ವಿದ್ಯಾರ್ಥಿ ಎಂದು ತಿಳಿದುಬಂದಿದೆ.
ವಿಶ್ವಾಸ್ ಇಲ್ಲಿನ ಕೊಡಿಗೆಹಳ್ಳಿಯ ಸಹ್ಯಾದ್ರಿ ಶಾಲೆಯಲ್ಲಿ 5ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಎಂದಿನಂತೆ ಶುಕ್ರವಾರ ವಿಶ್ವಾಸ್, ಮನೆಯ ಕೋಣೆಗೆ ಹೋಗಿ ಕಟ್ಟಲಾಗಿದ್ದ ಜೋಳಿಗೆಯಲ್ಲಿ ಕುಳಿತು ಮೊಬೈಲ್ ನಲ್ಲಿ ಆನ್ಲೈನ್ ಪಾಠ ಕೇಳುತ್ತಿದ್ದ. ಈ ಸಂದರ್ಭದಲ್ಲಿ ಏಕಾಏಕಿ ಜಾರಿದ ಪರಿಣಾಮ ಜೋಳಿಗೆ ಉರುಳು ಕುತ್ತಿಗೆಗೆ ಸಿಲುಕಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Next Story