ಮಂದಿರ ನಿರ್ಮಾಣಕ್ಕಾಗಿ ಎಸ್ಬಿಐ ಮೂಲಕ ಹಣ ಸಂಗ್ರಹ ಅನೈತಿಕ: ಎಸ್ಡಿಪಿಐ
ಬೆಂಗಳೂರು, ಆ.29: ರಾಮಮಂದಿರ ನಿರ್ಮಾಣಕ್ಕಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ಬಳಸಿಕೊಂಡು ಹಣ ಸಂಗ್ರಹಿಸುವುದು, ಬಾಬರಿ ಮಸೀದಿಯ ಲೂಟಿ ಮಾಡಿದ ಭೂಮಿಯಲ್ಲಿ ದೇವಾಲಯದ ನಿರ್ಮಾಣದಂತೆಯೇ ಅನೈತಿಕವಾದುದು. ಇದು ದೇಶದ ಜಾತ್ಯತೀತ ಸ್ವರೂಪವನ್ನೇ ಪ್ರಶ್ನಿಸುತ್ತದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆಕ್ಷೇಪ ವ್ಯಕ್ತಪಡಿಸಿದೆ.
ದೇಶವನ್ನು ಮತಾಂಧ ಫ್ಯಾಶಿಸ್ಟ್ ಶಕ್ತಿಗಳು ಆಳುತ್ತಿದ್ದರೂ, ಭಾರತ ಇನ್ನೂ ಜಾತ್ಯತೀತ ದೇಶವಾಗಿಯೇ ಇದೆ. ಬಾಬರಿ ಮಸೀದಿಯ ಧ್ವಂಸ, ಮಹಾತ್ಮ ಗಾಂಧಿಯವರ ಹತ್ಯೆಯ ನಂತರ ಸ್ವತಂತ್ರ ಭಾರತದ ಎರಡನೇ ಭಯೋತ್ಪಾದಕ ಕೃತ್ಯವಾಗಿದೆ ಎಂದು ಎಸ್ಡಿಪಿಐನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಹೇಳಿದ್ದಾರೆ.
ಮಂದಿರವನ್ನು ನಾಶಮಾಡುವ ಮೂಲಕ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬುದನ್ನು ದೃಢಪಡಿಸಲು ಯಾವುದೇ ಪುರಾವೆಗಳಿಲ್ಲ ಮತ್ತು ಮಸೀದಿ ನೆಲಸಮ ಮಾಡಿರುವುದು ಕಾನೂನುಬಾಹಿರ ಎಂಬ ಸುಪ್ರೀಂಕೋರ್ಟ್ ಕಂಡುಕೊಂಡ ಸ್ವಯಂ ಅನ್ವೇಷಣೆಗೆ ವಿರುದ್ಧವಾಗಿ, ಬಾಬರಿ ಮಸೀದಿ ಭೂಮಿಯನ್ನು ಸುಪ್ರೀಂ ಕೋರ್ಟ್ ಕಾನೂನುಬಾಹಿರವಾಗಿ ದೇವಾಲಯ ನಿರ್ಮಾಣಕ್ಕಾಗಿ ಹಸ್ತಾಂತರಿಸಿತು. ಈಗ, ಮಂದಿರ ನಿರ್ಮಾಣಕ್ಕಾಗಿ ಎಸ್ಬಿಐ ಮೂಲಕ ಹಣ ಸಂಗ್ರಹಿಸುವ ಪ್ರಸ್ತುತ ಕ್ರಮವು ಮೋದಿ ಸರಕಾರದ ಅನೈತಿಕ ಮತ್ತು ಜಾತ್ಯತೀತ ವಿರೋಧಿ ಕ್ರಮವಾಗಿದೆ ಎಂದು ಎಸ್ಡಿಪಿಐ ಹೇಳಿದೆ.
ಕೇಂದ್ರ ಸರಕಾರದ ಜಾತ್ಯತೀತ ವಿರೋಧಿ ಕೃತ್ಯಗಳಿಗಿಂತ, ಈ ವಿಷಯದಲ್ಲಿ ಜಾತ್ಯತೀತ ಪಕ್ಷಗಳೆಂದು ಕರೆಯಲ್ಪಡುವವರ ಪಕ್ಷಗಳ ಮೌನವು ಅತ್ಯಂತ ಆತಂಕಕಾರಿ. ಮೋದಿ ಸರಕಾರದ ಎಲ್ಲಾ ಪ್ರಜಾಪ್ರಭುತ್ವ ವಿರೋಧಿ ಮತ್ತು ಜಾತ್ಯತೀತ ವಿರೋಧಿ ಚಟುವಟಿಕೆಗಳನ್ನು ಅವರು ಲಘುವಾಗಿ ತೆಗೆದುಕೊಂಡಿದ್ದಾರೆಂದು ತೋರುತ್ತದೆ, ಇದರಿಂದಾಗಿ ಸರಕಾರವು ತನ್ನ ಎಲ್ಲ ಫ್ಯಾಸಿಸ್ಟ್ ಕಾರ್ಯಸೂಚಿಗಳನ್ನು ಸುಲಭವಾಗಿ ಕಾರ್ಯಗತಗೊಳಿಸಲು ಸಾಧ್ಯವಾಗುತ್ತಿದೆ ಎಂದು ಪಕ್ಷ ಅಭಿಪ್ರಾಯಿಸಿದೆ.
ಭಾರತ ದೇಶವನ್ನು ಮನುಸ್ಮೃತಿ ಆಧಾರಿತ ಹಿಂದುತ್ವ ದೇಶವನ್ನಾಗಿ ಪರಿವರ್ತಿಸುವ ಆರ್ಎಸ್ಎಸ್ ಕಾರ್ಯಸೂಚಿಯನ್ನು ವಿರೋಧಿಸಲು ಮತ್ತು ವಿಫಲಗೊಳಿಸಲು ದೇಶದ ಎಲ್ಲಾ ಜಾತ್ಯತೀತ ಮನಸ್ಸಿನ ಜನರು ಮುಂದೆ ಬರದಿದ್ದರೆ, ವೈವಿಧ್ಯತೆಯ ಭಾರತ ಎಂಬುದು ಕೇವಲ ಕಥೆಯಾಗಿ ಉಳಿಯಬಹುದು. ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹಿಸಲು ಎಸ್ಬಿಐ ಅನ್ನು ಬಳಸುವ ಪ್ರಸ್ತುತ ಯೋಜನೆಯ ವಿರುದ್ಧ ಪ್ರತಿಭಟನೆಗಳು ಆರಂಭಗೊಳ್ಳಬೇಕಾಗಿವೆ ಎಂದು ಅಬ್ದುಲ್ ಮಜೀದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.