ವಿದೇಶಾಂಗ ಕಾರ್ಯದರ್ಶಿಯನ್ನು ಭೇಟಿಯಾದ ಡಾ. ಆರತಿ ಕೃಷ್ಣ
ಹೊಸದಿಲ್ಲಿ : ಸಾಗರೋತ್ತರ ಭಾರತೀಯ ಕಾಂಗ್ರೆಸ್ ಕಾರ್ಯದರ್ಶಿ (ಮಧ್ಯ ಪೂರ್ವ ದೇಶಗಳ ಉಸ್ತುವಾರಿ), ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅನಿವಾಸಿ ಭಾರತೀಯ ಘಟಕದ ಅಧ್ಯಕ್ಷೆ ಹಾಗೂ ಕರ್ನಾಟಕ ಸರಕಾರದ ಅನಿವಾಸಿ ಭಾರತೀಯ ವೇದಿಕೆಯ ಪೂರ್ವಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರು ಭಾರತೀಯ ವಿದೇಶಾಂಗ ಕಾರ್ಯದರ್ಶಿ ಹರ್ಷ್ ಶೃಂಗ್ಲಾ ಅವರನ್ನು ಹೊಸದಿಲ್ಲಿಯಲ್ಲಿ ಭೇಟಿಯಾದರು.
ಕೋವಿಡ್ 19 ನ ಲಾಕ್ ಡೌನ್ ದಿನಗಳ ನಂತರ ಡಾ. ಆರತಿ ಕೃಷ್ಣ ಅವರದ್ದು ಇದು ಪ್ರಥಮ ಪ್ರಯಾಣವಾಗಿತ್ತು.
ಡಾ. ಆರತಿ ಕೃಷ್ಣ ವಿದೇಶಾಂಗ ಸಚಿವಾಲಯದಿಂದ ದೊರೆತ ಸಮಯೋಚಿತ ಹಾಗೂ ತುರ್ತು ಸಹಕಾರಕ್ಕಾಗಿ ಸಚಿವಾಲಯದ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಕೋವಿಡ್ 19 ವಿಶ್ವವನ್ನು ತಲ್ಲಣಗೊಳಿಸಿದಾಗ ಪ್ರಪಂಚದಾದ್ಯಂತ ನೆಲೆಸಿದ್ದ ಭಾರತದ ವಿವಿಧ ರಾಜ್ಯಗಳ ಲಕ್ಷಾಂತರ ಭಾರತೀಯರು ವಿದೇಶಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಸ್ವದೇಶಕ್ಕೆ ತೆರಳಲು ಇಚ್ಛಿಸಿದ ಸಾವಿರಾರು ಭಾರತೀಯ ಪ್ರಜೆಗಳು ಸಹಾಯಕ್ಕಾಗಿ ತನ್ನನ್ನು ಸಂಪರ್ಕಿಸುತ್ತಿದ್ದರು. ಈ ಸಂದರ್ಭದಲ್ಲಿ ವಿವಿಧ ದೇಶಗಳ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ವರ್ಗ, ಹಾಗೂ ಭಾರತೀಯ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಅತ್ಯುತ್ತಮವಾಗಿ ಸ್ಪಂದಿಸಿ, ಅವರೆಲ್ಲರಿಗೆ ಸೂಕ್ತ ನೆರವನ್ನು ಕ್ಷಿಪ್ರವಾಗಿ ನೀಡಲು ಸಹಕರಿಸಿದ್ದಾರೆ ಎಂದು ತಿಳಿಸಿದರು. ಇದೊಂದು ಹಿಂದೆಂದೂ ಕಂಡಿರದ ಸಾಂತ್ವನದ ಬೃಹತ್ ಕಾರ್ಯಾಚರಣೆಯಾಗಿತ್ತು ಹಾಗೂ ಈ ಕಾರ್ಯಕ್ಕಾಗಿ ತಾನು ತಮಗೆಲ್ಲರಿಗೂ ಚಿರಋಣಿಯಾಗಿರುವೆ ಎಂಬ ಸಂದೇಶವನ್ನು ವೈಯಕ್ತಿಕವಾಗಿ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆಂದು ಹರ್ಷ್ ಶೃಂಗ್ಲಾ ಅವರಿಗೆ ತಿಳಿಸಿದರು.
ತಮ್ಮ ಹೇಳಿಕೆಯಲ್ಲಿ, ಡಾ. ಆರತಿ ಕೃಷ್ಣ ಅವರು ವಿವಿಧ ದೇಶಗಳ ಸಾಗರೋತ್ತರ ಭಾರತೀಯ ಕಾಂಗ್ರೆಸ್ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಸ್ಮರಿಸಿ, ಕೋವಿಡ್ 19ರ ಸಂಕಷ್ಟದ ಸಮಯದಲ್ಲಿ ಐಒಸಿ ಘಟಕಗಳು ನಿರಾಶ್ರಿತರಿಗಾಗಿ ಸಲ್ಲಿಸಿದ ಅಭೂತಪೂರ್ವ ಸೇವಾಕಾರ್ಯಗಳಿಗಾಗಿ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.