ಕೊರೋನ ಸೋಂಕಿನಿಂದ ನಂಜನಗೂಡು ತಾ.ಪಂ ಉಪಾಧ್ಯಕ್ಷ ನಿಧನ
ಮೈಸೂರು,ಸೆ.17: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗ, ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಪಂಚಾಯತ್ ಹಾಲಿ ಉಪಾಧ್ಯಕ್ಷ ಗೋವಿಂದರಾಜನ್ ಕೊರೋನ ಸೋಂಕಿನಿಂದ ನಿಧನರಾಗಿದ್ದಾರೆ.
ಮೃತ ಗೋವಿಂದರಾಜನ್ (48) ಪತ್ನಿ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಕಳೆದ ವಾರ ಇವರಿಗೆ ಕೊರೋನ ಪಾಸಿಟಿವ್ ಬಂದಿತ್ತು ಎನ್ನಲಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಗುರುವಾರ ಸಾವನ್ನಪ್ಪಿದ್ದಾರೆ.
ಮೃತರು ಮೂರು ಬಾರಿ ತಾ.ಪಂ.ಸದಸ್ಯರಾಗಿ ಆಯ್ಕೆಯಾಗಿದ್ದು ಎರಡು ಬಾರಿ ತಾ.ಪಂ.ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಮೃತರ ಅಂತ್ಯಕ್ರಿಯೆ ಅವರ ಸ್ವಗ್ರಾಮ ಹೆಜ್ಜಿಗೆ ಗ್ರಾಮದಲ್ಲಿ ಕೊರೋನ ನಿಯಮದ ಪ್ರಕಾರ ನೆರವೇರಿಸಲಾಯಿತು.
ಮೃತರ ನಿಧನಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಂಸದ ಆರ್.ಧ್ರುವನಾರಾಯಣ್, ಶಾಸಕ ಹರ್ಷವರ್ಧನ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಾ.ಪಂ.ಅಧ್ಯಕ್ಷ ಬಿ.ಎಸ್.ಮಹದೇವಪ್ಪ, ತಾಲೂಕು ಆಡಳಿತ ಸೇರಿದಂತೆ ಅವರ ಅಪಾರ ಸ್ನೇಹಿರು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.