ಬ್ಯುಸಿನೆಸ್ ರ್ಯಾಂಕಿಂಗ್ನಲ್ಲಿ ಕರ್ನಾಟಕ ಅತ್ಯುತ್ತಮ ಸ್ಥಾನ ಪಡೆಯಲಿದೆ: ಜಗದೀಶ್ ಶೆಟ್ಟರ್
ಬೆಂಗಳೂರು ಸೆ. 18: ಮುಂದಿನ ಬಾರಿಯ ಈಸ್ ಆಫ್ ಡೂಯಿಂಗ್ ಬ್ಯೂಸಿನೆಸ್ ರ್ಯಾಂಕಿಂಗ್ನಲ್ಲಿ ರಾಜ್ಯ ಮೊದಲ 5 ರಲ್ಲಿ ಸ್ಥಾನವನ್ನು ಪಡೆಯಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಎಫ್ಕೆಸಿಸಿಐ ವತಿಯಿಂದ ನಗರದ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 15ನೇ ರಫ್ತು ಉತ್ತೇಜನಾ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದ ಅವರು, ಈ ಬಾರಿ ಉದ್ಯಮ ಸ್ನೇಹಿ ರ್ಯಾಂಕಿಂಗ್ನಲ್ಲಿ ಕರ್ನಾಟಕ ರಾಜ್ಯ ಕಡಿಮೆ ಸ್ಥಾನವನ್ನು ಪಡೆದಿದೆ. ಈ ಸರ್ವೆಯು ಕಳೆದ ವರ್ಷ ನವೆಂಬರ್ ನಲ್ಲಿ ಪ್ರಾರಂಭವಾಗಿತ್ತು. ಅಲ್ಲದೆ, ಈ ರ್ಯಾಂಕಿಂಗ್ ಮಾರ್ಚ್ ತಿಂಗಳಲ್ಲಿ ಪ್ರಕಟವಾಗಬೇಕಾಗಿತ್ತು. ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಆಡಳಿತಾತ್ಮಕವಾಗಿ ಹಾಗೂ ನೀತಿ ನಿಯಮಗಳಲ್ಲಿ ಹಲವಾರು ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದೆ. ಇದರ ಪರಿಣಾಮ ಮುಂದಿನ ರ್ಯಾಂಕಿಂಗ್ ಪಟ್ಟಿಯಲ್ಲಿ ನಾವು ಪ್ರತಿಫಲವನ್ನು ಪಡೆದುಕೊಳ್ಳಲಿದ್ದೇವೆ ಎಂದರು.
ಸಾಫ್ಟ್ ವೇರ್ ರಫ್ತಿನಲ್ಲಿ ದೇಶದಲ್ಲಿ ಮೊದಲ ಸ್ಥಾನವನ್ನು ಹೊಂದಿರುವ ಕರ್ನಾಟಕ ದೇಶದ ಒಟ್ಟಾರೆ ರಫ್ತಿನ ಶೇಕಡಾ 17.04% ರಷ್ಟು ಕೊಡುಗೆಯನ್ನು ನೀಡುತ್ತಿದೆ. ಇದಕ್ಕೆ ಮತ್ತಷ್ಟು ಪುಷ್ಟಿಯನ್ನು ನೀಡುವ ಉದ್ದೇಶದಿಂದ ಕೇಂದ್ರ ಸರಕಾರದ ಉಪಕ್ರಮಗಳ ಜೊತೆಯಲ್ಲಿಯೇ ರಾಜ್ಯ ಸರಕಾರ 6 ಪ್ರಮುಖ ಕ್ಷೇತ್ರಗಳನ್ನು ಗುರುತಿಸಿದ್ದು ಕರಡು ವರದಿಗಳನ್ನು ಸಿದ್ದಪಡಿಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಆರೋಗ್ಯ ಮತ್ತು ಸ್ವಾಸ್ಥ್ಯ ಸೇವೆಗಳು, ಶೈಕ್ಷಣಿಕ ಸೇವೆಗಳು, ಇನ್ಪ್ರಾಸ್ಟಕ್ಚರ್ ಮತ್ತು ಕನ್ಟ್ರಕ್ಷನ್ ಸೇವೆಗಳು, ರೆಮಿಟೆನ್ಸ್ ಮತ್ತು ಇಮಿಗ್ರೇಷನ್ ಸಪೋರ್ಟ್ ಸೇವೆಗಳು, ಲಾಜಿಸ್ಟಿಕ್ ಮತ್ತು ಸಾರಿಗೆ ಸೇವೆಗಳ ಹಾಗೂ ಮನೋರಂಜನಾ ಸೇವಾ ವಲಯಗಳನ್ನು ಪ್ರಮುಖ ಕ್ಷೇತ್ರಗಳಾಗಿ ಗುರುತಿಸಲಾಗಿದೆ. ಇವುಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕರಡು ವರದಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ದೇಶದ ಸೇವೆಗಳ ರಫ್ತಿನ ವಿಭಾಗದಲ್ಲಿ ಶೇ.40 ರಷ್ಟು ಪಾಲನ್ನು ಹೊಂದಿದೆ. ಮರ್ಚಂಡೈಸ್ ರಫ್ತಿನ ಶೇಕಡಾ 18.83 ರ ಪಾಲನ್ನು ನೀಡುತ್ತಿದೆ. ಅಲ್ಲದೆ, 2019-2020 ನೇ ಸಾಲಿನಲ್ಲಿ 100 ಬಿಲಿಯನ್ ಡಾಲರ್ ಗಳಷ್ಟು ರಫ್ತನ್ನು ರಾಜ್ಯ ಮಾಡಿದೆ. ರಾಜ್ಯ ಕೈಗಾರಿಕೆಗಳ ಅಭಿವೃದ್ದಿಗೆ ಹಾಗೂ ಬೆಳವಣಿಗೆಗೆ ಸೂಕ್ತ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದರು.
ರಾಜ್ಯ ಸರಕಾರ ರಾಜ್ಯದಲ್ಲಿ ರಫ್ತು ಉತ್ತೇಜನ ಹಾಗೂ ಉದ್ಯೋಗಾವಕಾಶಗಳ ನಿರ್ಮಾಣಕ್ಕಾಗಿ ಹಲವಾರು ಕ್ರಾಂತಿಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಬೇಲೀಕೇರಿ ಬಂದರಿನ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಇದು ರಾಜ್ಯದ ರಫ್ತಿನ ಚಿತ್ರಣವನ್ನೇ ಬದಲಾಯಿಸಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯದ ಪ್ರಮುಖ 40 ಕೈಗಾರಿಕೋದ್ಯಮಿಗಳಿಗೆ ರಫ್ತು ಉತ್ತೇಜನಾ ಪ್ರಶಸ್ತಿಗಳನ್ನು ವಿತರಿಸಲಾಯಿತು. ಈ ಸಂಧರ್ಭದಲ್ಲಿ ಎಫ್ಕೆಸಿಸಿಐ ಅಧ್ಯಕ್ಷರಾದ ಸಿ.ಆರ್ ಜನಾರ್ಧನ, ಪೆರಿಕಾಲ್ ಎಂ ಸುಂದರ್, ಎಕ್ಸಪೋರ್ಟ್ ಎಕ್ಸಲೆನ್ಸ್ ಅವಾರ್ಡ್ ಸಮಿತಿಯ ಬಿ.ಪಿ ಶಶಿಧರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.