ಮಂಡ್ಯ: ಬೆಳೆ ಸಮೀಕ್ಷೆ ನಡೆಸಿದ ವ್ಯಕ್ತಿಗಳಿಗೆ ಜಿಲ್ಲಾಧಿಕಾರಿ ಸನ್ಮಾನ
ಮಂಡ್ಯ, ಸೆ.18: ಬೆಳೆ ಸಮೀಕ್ಷೆ ಒಂದು ಸಮಯದ ಕೆಲಸವಾಗಿರುವುದರಿಂದ ಜಿಲ್ಲೆಯಲ್ಲಿ ಸರ್ವೇ ಕಾರ್ಯವು ಸರಿಯಾಗಿ, ತ್ವರಿತವಾಗಿ, ಯಾವುದೇ ಆಕ್ಷೇಪಣೆಗಳಿಲ್ಲದೆ ನಡೆಯಬೇಕು. ಅಧಿಕಾರಿಗಳು ಉತ್ಸಾಹಭರಿತವಾಗಿ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ಹೆಚ್ಚು ಬೆಳೆ ಸಮೀಕ್ಷೆ ಮಾಡಿದ ವ್ಯಕ್ತಿಗಳಿಗೆ ಪ್ರೋತ್ಸಾಹ ಧನ ನೀಡಿ ಸನ್ಮಾನಿಸಿ ಅವರು ಮಾತನಾಡಿದರು.
ಸರ್ವೇ ವ್ಯಕ್ತಿಗಳ ಅನುಪಸ್ಥಿತಿಯಲ್ಲಿ ಜಿಲ್ಲೆಯನ್ನು ಉತ್ತಮ ಸ್ಥಾನದತ್ತ ಕೊಂಡೊಯ್ಯಲು ಜಿಲ್ಲೆಯ ಬೆಳೆ ಸರ್ವೇಯಲ್ಲಿ ಉತ್ತಮವಾಗಿ ತೊಡಗಿಸಿಕೊಂಡ ಇವರ ಕಾರ್ಯ ಶ್ಲಾಘನೀಯ. ಪಿಆರ್ಒಗಳು ಹೆಚ್ಚು ಕ್ರಿಯಾಶೀಲರಾಗಿ ಜಿಲ್ಲೆಗೆ ಉತ್ತಮ ಸ್ಥಾನ ಮತ್ತು ಹೆಸರು ತರುವ ಉತ್ತಮ ಮನಸ್ಥಿತಿ ಮನೋಭಾವದಿಂದ ಈ ಕಾರ್ಯವನ್ನು ಮಾಡಿದಾಗ ಜಿಲ್ಲೆಯು ಅಭಿವೃದ್ಧಿಯತ್ತ ಸಾಗುತ್ತದೆ ಎಂದು ಅವರು ಶ್ಲಾಘಿಸಿದರು.
ಬೆಳೆ ಸಮೀಕ್ಷೆಯನ್ನು ಉತ್ತಮವಾಗಿ ನಿರ್ವಹಿಸಿದ ಮಂಡ್ಯದ ಕಿರಣ್, ಮದ್ದೂರಿನ ಸುನೀತ, ಮಳವಳ್ಳಿಯ ಅರುಣ್ ಕುಮಾರ್ ಹಾಗೂ ಶ್ರೀರಂಗಪಟ್ಟಣ ಅಭಿಷೇಕ್ ಅವರಿಗೆ ಪ್ರೋತ್ಸಾಹ ಧನ ನೀಡಿ ಸನ್ಮಾನಿಸಲಾಯಿತು.
ಅಪರ ಜಿಲ್ಲಾಧಿಕಾರಿ ಶೈಲಾಜ, ಜಂಟಿ ಕೃಷಿ ನಿರ್ದೇಶಕ ಚಂದ್ರಶೇಖರ್, ಉಪ ತಹಶೀಲ್ದಾರ್ ಸ್ವಾಮಿಗೌಡ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.