ಭದ್ರಾ ಜಲಾಶಯದಿಂದ ನೀರಿನ ಹೊರ ಹರಿವು ಹೆಚ್ಚಳ: ನೆರೆ ಭೀತಿ
ಶಿವಮೊಗ್ಗ: ಭದ್ರಾ ಜಲಾಶಯದಿಂದ ನೀರಿನ ಹೊರ ಹರಿವು ಮತ್ತಷ್ಟು ಹೆಚ್ಚಳವಾಗಿದೆ. ಈಗ 40 ಸಾವಿರ ಕ್ಯೂಸೆಕ್ಗೂ ಹೆಚ್ಚು ನೀರು ಹೊರ ಬಿಡಲಾಗುತ್ತಿದೆ. ಇದರಿಂದ ಭದ್ರಾವತಿಯಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ.
ಭದ್ರಾ ಜಲಾಶಯದಿಂದ ನೀರಿನ ಹೊರ ಹರಿವು ಗಂಟೆ ಗಂಟೆಗೂ ಹೆಚ್ಚಳವಾಗುತ್ತಿದೆ. ಈಗ 50 ಸಾವಿರ ಕ್ಯೂಸೆಕ್ ಸನಿಹದಲ್ಲಿ ನೀರನ್ನು ಹೊರ ಬಿಡಲಾಗುತ್ತಿದೆ. ಬೆಳಗ್ಗೆ ನೀರಿನ ಹೊರ ಹರಿವು 10 ಸಾವಿರ ಕ್ಯೂಸೆಕ್ ಇತ್ತು. ಅ ಬಳಿ ಪ್ರತಿ ಗಂಟೆಗೆ ಹತ್ತು ಸಾವಿರ ಕ್ಯೂಸೆಕ್ನಂತೆ ಹೊರ ಹರಿವು ಹೆಚ್ಚಳ ಮಾಡಲಾಗುತ್ತಿದೆ. ಈ ಸಂಬಂಧ ಭದ್ರಾ ಜಲಾಶಯದ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಮಾಹಿತಿ ಪ್ರಕಟಿಸಲಾಗುತ್ತಿದೆ.
ಭದ್ರಾವತಿಯಲ್ಲಿ ನೆರೆ ಭೀತಿ
ಜಲಾಶಯದಿಂದ ನೀರಿನ ಹೊರ ಹರಿವು ಹೆಚ್ಚಳವಾಗುತ್ತಿದ್ದಂತೆ ಭದ್ರಾವತಿಯಲ್ಲಿ ನೆರೆ ಭೀತಿ ಶುರುವಾಗಿದೆ. ನದಿ ಪಾತ್ರದಲ್ಲಿರುವ ಬಡಾವಣೆಗಳಿಗೆ ನೀರು ನುಗ್ಗುವ ಆತಂಕವಿದೆ. ಆದ್ದರಿಂದ ಭದ್ರಾವತಿ ನಗರಸಭೆ ವತಿಯಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ನಿರಾಶ್ರಿತರ ಪುನರ್ ವಸತಿ ಕೇಂದ್ರಗಳನ್ನು ಸ್ಥಾಪಿಸಲು ನಗರಸಭೆ ಯೋಜಿಸಿದೆ.
ಸೇತುವೆ ಮೇಲೆ ವಾಹನ ಸಂಚಾರ ಬಂದ್
ಹೊಳೆಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದ್ದು, ಭದ್ರಾವತಿಯ ಹೊಸ ಸೇತುವೆ ಮುಳುಗುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಹೊಸ ಸೇತುವೆ ಮೇಲೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸೇತುವೆಯ ಎರಡು ಕಡೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದು, ಹಳೆ ಸೇತುವೆ ಮೂಲಕ ಸಂಚರಿಸುವಂತೆ ಸೂಚಿಸುತ್ತಿದ್ದಾರೆ.