ಕೇಂದ್ರ ಸರಕಾರ ರೈತರ ಭವಿಷ್ಯ ಅಳಿಸಿ ಹಾಕುತ್ತಿದೆ: ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು, ಸೆ. 20: ವಿರೋಧದ ನಡುವೆಯೂ ರಾಜ್ಯಸಭೆಯಲ್ಲಿ ಕೃಷಿ ಮಸೂದೆಗಳು ಅಂಗೀಕಾರವಾಗಿದ್ದು, ಕೇಂದ್ರ ಸರಕಾರ ರೈತರ ಭವಿಷ್ಯ ಅಳಿಸಿ ಹಾಕುತ್ತಿದೆ ಎಂದು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪ್ರತಿ ಬಾರಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಸರಕಾರದ ಹೊಸ ಯೋಜನೆಗಳು ನವ ಭಾರತ ನಿರ್ಮಾಣಕ್ಕೆ ನಾಂದಿ ಹಾಡುತ್ತದೆ ಎಂದು ಹೇಳುತ್ತಾರೆ. ಆದರೆ ನೋಟು ರದ್ದತಿ, ಜಿಎಸ್ಟಿ, ಮೇಕ್ ಇನ್ ಇಂಡಿಯಾ, ಗರೀಬ್ ಕಲ್ಯಾಣ ಯೋಜನೆಯಂತೆ ಮತ್ತಷ್ಟು ಕತ್ತಲೆಗೆ ತಳ್ಳುತ್ತವೆ. ಇದೀಗ ಕೃಷಿ ಮಸೂದೆ ಮೂಲಕ ಪಿಎಂ ಮೋದಿ ಭಾರತದ ರೈತರನ್ನು ಸಂಕಷ್ಟಕ್ಕೆ ನೂಕುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ಭವಿಷ್ಯದ ಬಗ್ಗೆ ಮತ್ತು ರೈತರು ತಮ್ಮ ಉತ್ಪನ್ನಗಳಿಗೆ ಹೇಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಪಡೆಯುತ್ತಾರೆ ಎಂಬುದರ ಬಗ್ಗೆ ಪ್ರತಿಭಟನಾ ನಿರತ ರೈತರಿಗೆ ಮನವರಿಕೆ ಮಾಡಲು ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ರೈತರ ಭವಿಷ್ಯವನ್ನು ಅಳಿಸಿಹಾಕಲು ಬಿಜೆಪಿಯವರು ತಮ್ಮ ಬಹುಮತವನ್ನು ಬಳಸಿಕೊಳ್ಳುತ್ತಿದ್ದಾರೆ. ಇದು ನಮ್ಮ ಕೃಷಿ ಆರ್ಥಿಕತೆಗೆ ಹಾನಿಕಾರಕವಾಗಿದೆ ಎಂದು ತಿಳಿಸಿದ್ದಾರೆ.
BJP Govt has not been able to convince protesting farmers on the future of APMCs and on how farmers will get MSP for their produce. They are flexing their majority to wipe out the future of the farmers. This is disastrous for our agrarian economy.
— Mallikarjun Kharge (@kharge) September 20, 2020