ರೈತರ ಹೋರಾಟಕ್ಕೆ ಜೆಡಿಎಸ್ ಸದಾ ಬೆಂಬಲ: ಮಾಜಿ ಸಚಿವ ರೇವಣ್ಣ
ಬೆಂಗಳೂರು, ಸೆ.22: ರಾಜ್ಯ ಸರಕಾರದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಜೆಡಿಎಸ್ ಬಲವಾಗಿ ವಿರೋಧ ವ್ಯಕ್ತಪಡಿಸಿದ್ದು, ರೈತರ ಹೋರಾಟವನ್ನು ಬೆಂಬಲಿಸುತ್ತೇವೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ತಿಳಿಸಿದರು.
ಮಂಗಳವಾರ ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆದ ರೈತ, ದಲಿತ, ಕಾರ್ಮಿಕ ಐಕ್ಯ ಹೋರಾಟದ ಜನತಾ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಉಳುವವನೇ ಭೂಮಿಯ ಒಡೆಯ ಎಂಬ ಕಾಯ್ದೆ ಜಾರಿಯಲ್ಲಿದೆ. ಅದು ರೈತರಿಗೆ ಹಲವಾರು ಹಕ್ಕುಗಳನ್ನು ನೀಡಿದೆ. ಆ ಹಕ್ಕುಗಳನ್ನು ಕಸಿದುಕೊಂಡು ಇಂದಿನ ಸರಕಾರ ಕಾನೂನು ಮಾಡಲು ಹೊರಟಿರುವುದು ಸರಿಯಲ್ಲ ಎಂದರು.
ಅಲ್ಲದೆ, ರಾಜ್ಯ ಸರಕಾರ ಜಾರಿಗೊಳಿಸಿರುವ ರೈತ ವಿರೋಧಿ ಸುಗ್ರೀವಾಜ್ಞೆಯನ್ನು ಜೆಡಿಎಸ್ ಪಕ್ಷ ವಿರೋಧಿಸುತ್ತದೆ. ಪಕ್ಷದ ಪ್ರಮುಖ ನಾಯಕ ಎಚ್.ಡಿ. ದೇವೇಗೌಡ ಅವರು ರಾಜ್ಯಸಭೆಯಲ್ಲಿ ಕೃಷಿ ಮಸೂದೆಯ ವಿರುದ್ಧ ಮತ ಹಾಕಿದ್ದಾರೆ. ರಾಜ್ಯದಲ್ಲಿಯೂ ರೈತ ವಿರೋಧಿ ಮಸೂದೆಯನ್ನು ನಾವು ವಿರೋಧಿಸುತ್ತೇವೆ ಎಂದು ತಿಳಿಸಿದರು.
ಇಂದು ಅಥವಾ ನಾಳೆಯೊಳಗೆ ಭೂಸುಧಾರಣಾ ತಿದ್ದುಪಡಿ ಕಾಯ್ದೆಯಂತಹ ಬಡಜನ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡಲು ಸರಕಾರ ಹೊರಟಿದೆ. ಆದರೆ ವಿರೋಧ ಪಕ್ಷಗಳು ಇದನ್ನು ಜಾರಿ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿವೆ. ಜೊತೆಗೆ ಈ ಕಾಯ್ದೆಗಳನ್ನು ಜಾರಿಗೆ ತರಕೂಡದು ಎಂದು ರಾಜ್ಯದಾದ್ಯಂತ ಹೋರಾಟ ನಡೆಯುತ್ತಿದೆ. ಈ ಸಂದರ್ಭದಲ್ಲಿ ನಾವು ಪರ್ಯಾಯ ಅಧಿವೇಶನ ನಡೆಸುತ್ತಿದ್ದೇವೆ. ಹಾಗಾಗಿ ಇದು ಅತ್ಯಂತ ಮಹತ್ವವುಳ್ಳದ್ದಾಗಿದೆ.
-ನೂರ್ ಶ್ರೀಧರ್, ಹೋರಾಟಗಾರ
ನಮಗೆ ಭೂಮಿಯೆಂದರೆ ನಮಗೆ ಕೇವಲ ನಿವೇಶನವಲ್ಲ, ಹೊಲವಲ್ಲ, ಮನೆಯಲ್ಲ, ಅದು ನಮ್ಮ ಬದುಕು. ಹಾಗಾಗಿ ಈ ಹೋರಾಟ ರೈತಾಪಿ ವರ್ಗಕ್ಕೆ ಸ್ವಾತಂತ್ರ ಚಳುವಳಿ ಇದ್ದಂತೆ. ರೈತರಿಗೆ ಸ್ವಾತಂತ್ರ ಚಳುವಳಿಯೆಂದರೆ ಭೂ ಚಳುವಳಿಯೇ ಆಗಿದೆ. ಸ್ವಾತಂತ್ರ ಎಂದರೆ ಏನು, ರೈತರಿಗೆ ಭೂಮಿ ಸಿಗುವುದೇ ಅಲ್ಲವೇ
-ಆರ್.ಮಾನಸಯ್ಯ, ಕಾರ್ಮಿಕ ಮುಖಂಡ
ಇಷ್ಟು ಬೇಗ ಭೂ ಸುಧಾರಣೆ, ಎಪಿಎಂಸಿ ತಿದ್ದುಪಡಿ ಕಾಯ್ದೆಗಳನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೊಳಿಸುತ್ತಿರುವುದು ಏಕೆ. ಇದು ಹುಡುಗಾಟಿಕೆಯಲ್ಲ. ಆದರೆ, ಚರ್ಚೆ ಇಲ್ಲದೆ, ಈ ರೀತಿ ನಡೆದುಕೊಳ್ಳುತ್ತಿರುವುದು ದುರಂತವೇ ಸರಿ
-ಪ್ರಕಾಶ್ ಕಮ್ಮರಡ್ಡಿ, ಕೃಷಿ ಆರ್ಥಿಕ ತಜ್ಞ
‘ಕದ್ದು ಅಧಿಕಾರ ಹಿಡಿದಿದ್ದಾರೆ'
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಸಿರು ಶಾಲು ಕದ್ದು ಅಧಿಕಾರ ಹಿಡಿದಿದ್ದಾರೆ. ಈಗ ರೈತರಿಗೆ ಮೋಸ ಮಾಡಲು ಹೆಜ್ಜೆ ಹಾಕಿದ್ದು, ಸೆ.23ರಂದು ಸೂಕ್ತ ನಿರ್ಧಾರ ತೆಗೆದುಕೊಳ್ಳದಿದ್ದರೆ, ಬಂದ್ ಕಡ್ಡಾಯವಾಗಲಿದೆ.
-ಮಾರುತಿ ಮಾನ್ಪಡೆ, ಉಪಾಧ್ಯಕ್ಷ, ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘ
‘ಜೆಡಿಎಸ್ ಕೈಜೋಡಿಸಿದರೆ, ಮಸೂದೆ ಅಂಗೀಕಾರವಿಲ್ಲ'
ಮೇಲ್ಮನೆ ವಿಧಾನ ಪರಿಷತ್ತಿನಲ್ಲಿ ಜೆಡಿಎಸ್ ನಮ್ಮೊಂದಿಗೆ ಕೈಜೋಡಿಸಿದರೆ, ಈ ಜನವಿರೋಧಿ ಕಾಯ್ದೆಗಳು ಅಂಗೀಕಾರ ಆಗದಂತೆ ನೋಡಿಕೊಳ್ಳುತ್ತೇವೆ.
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ