ಸುರೇಶ್ ಅಂಗಡಿಯನ್ನು ಸಿಎಂ ಮಾಡಲು ಹೈಕಮಾಂಡ್ ಚರ್ಚೆ ನಡೆಸಿತ್ತು: ಸುರೇಶ್ ಅಂಗಡಿ ಸೋದರ ಮಾವ
ಸುರೇಶ್ ಅಂಗಡಿ
ಬೆಳಗಾವಿ, ಸೆ.29: ಕೇಂದ್ರ ಸಚಿವರಾಗಿದ್ದ ಸುರೇಶ ಅಂಗಡಿಯವರನ್ನು ರಾಜ್ಯದ ಮುಂದಿನ ಮುಖ್ಯಮಂತ್ರಿ ಮಾಡಲು ಬಿಜೆಪಿ ಹೈಕಮಾಂಡ್ನಲ್ಲಿ ಚರ್ಚೆ ನಡೆದಿತ್ತು ಎಂದು ಅಂಗಡಿ ಅವರ ಸೋದರ ಮಾವ, ರೈತ ಮುಖಂಡ ಲಿಂಗರಾಜ ಪಾಟೀಲ ತಿಳಿಸಿದ್ದಾರೆ.
ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುರೇಶ್ ಅಂಗಡಿ ಅವರನ್ನು ಸಿಎಂ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಹೊಸದಿಲ್ಲಿಯಲ್ಲಿ ಹಲವು ಬಾರಿ ಸಭೆಗಳು ನಡೆದಿದ್ದವು. ರಾಜ್ಯದ ಸಂಸದರೂ ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ಆದರೆ ವಿಧಿ ಈ ರೀತಿ ಮಾಡಿತು ಎಂದು ತಿಳಿಸಿದರು.
ಮುಂಬರುವ ಉಪ ಚುನಾವಣೆಯಲ್ಲಿ ಸುರೇಶ್ ಅಂಗಡಿ ಅವರ ಪತ್ನಿ, ಪುತ್ರಿಯರಲ್ಲಿ ಯಾರನ್ನಾದರೂ ಪರಿಗಣಿಸಿ ಟಿಕೆಟ್ ನೀಡಿದರೆ ದಾಖಲೆ ಅಂತರದಿಂದ ಗೆದ್ದು ಬರುತ್ತಾರೆ. ಅನುಕಂಪದ ಜೊತೆಗೆ ನಿಮ್ಮ ಕುಟುಂಬದವರೆ ಚುನಾವಣೆಗೆ ನಿಲ್ಲಬೇಕೆಂದು ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಿಗೆ ತಿಳಿಸಿದ್ದೇನೆ ಎಂದು ಹೇಳಿದರು.
Next Story