ನನ್ನ ಮಗನನ್ನು ಜೈಲಿನಲ್ಲೇ ಇಟ್ಟುಬಿಡಿ: ಡಿ.ಕೆ.ಶಿವಕುಮಾರ್ ತಾಯಿ ಗೌರಮ್ಮ ಆಕ್ರೋಶ
ಬೆಂಗಳೂರು, ಅ. 5: `ನನ್ನ ಮಗ ಡಿ.ಕೆ.ಶಿವಕುಮಾರ್ ನನ್ನು ಜೈಲಿನಲ್ಲೆ ಇಟ್ಟುಬಿಡಿ. ಸುಮ್ಮನೆ ಏಕೆ ನಮ್ಮ ಹೊಟ್ಟೆ ಉರಿಸುತ್ತೀರಿ, ಏನು ಬೇಕಾದರೂ ಮಾಡಿಕೊಳ್ಳಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ತಾಯಿ ಗೌರಮ್ಮ ಇಂದಿಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಸೋಮವಾರ ಕನಕಪುರದ ತಾಲೂಕಿನ ಕೋಡಿಹಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಅವಿದ್ಯಾವಂತೆ, ಮಾತನಾಡಲು ಬರುವುದಿಲ್ಲ. ನನಗೆ ಆರೋಗ್ಯ ಸರಿಯಾಗಿಲ್ಲ. ಹುಷಾರಾದ ನಂತರ ಮಾತನಾಡುತ್ತೇನೆ. ಸಿಬಿಐನವರು ಏನು ಬೇಕಾದರೂ ಮಾಡಿಕೊಳ್ಳಲಿ. ಬೀರು ಬೀಗ ಹೊಡೆದು ಅಲ್ಲೇನಿದೆ ಎಂದು ಪರಿಶೀಲನೆ ಮಾಡಿಕೊಳ್ಳಲಿ. ನಾವು ಅವರಿಗೆ ಯಾವುದಕ್ಕೂ ಅಡ್ಡಿಪಡಿಸುವುದಿಲ್ಲ ಎಂದರು.
'ಅವರು ಸಾಯುವವರೆಗೂ ನಮಗೆ ನೆಮ್ಮದಿ ಇಲ್ಲ. ಈ ಮೊದಲು ನನ್ನ ಮಗನನ್ನು ಜೈಲಿಗೆ ಕಳುಹಿಸಿದ್ದರು. ಈಗಲೂ ಜೈಲಿಗೆ ಕಳುಹಿಸಲಿ. ನಾನೇ ಹೇಳಿ ಕಳುಹಿಸುತ್ತೇನೆ, ಜೈಲಿಗೆ ಹೋಗಪ್ಪ' ಎಂದು ಗೌರಮ್ಮ ಇದೇ ವೇಳೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಬೆಳ್ಳಂಬೆಳಗ್ಗೆ ದಾಳಿ ನಡೆಸಲು ಆಗಮಿಸಿದ ಅಧಿಕಾರಿಗಳನ್ನು ಸ್ವತಃ ಗೌರಮ್ಮ ಅವರೇ ಚಹಾ ಕೊಟ್ಟು ಸ್ವಾಗತಿಸಿದರು ಎಂದು ತಿಳಿದು ಬಂದಿದೆ.