ಚಿಕ್ಕಮಗಳೂರು: 10 ಸಾವಿರ ದಾಟಿದ ಕೊರೋನ ಸೋಂಕಿತರ ಸಂಖ್ಯೆ; ಒಟ್ಟು 128 ಸಾವು
ಚಿಕ್ಕಮಗಳೂರು, ಅ.9: ಕೋವಿಡ್ ಸೋಂಕಿಗೆ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಶುಕ್ರವಾರ ಮೃತಪಟ್ಟಿದ್ದರೆ, 129 ಮಂದಿಯಲ್ಲಿ ಪಾಸಿಟಿವ್ ಇರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ. 167 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಕೊರೋನ ಸೋಂಕಿಗೆ ತುತ್ತಾಗಿದ್ದ ಶೃಂಗೇರಿ ತಾಲೂಕಿನ ಮೆಣಸೆ ಸಮೀಪದ ಸಿಡ್ಲೆ ಗ್ರಾಮದ 69 ವರ್ಷ ಪ್ರಾಯದ ಪುರುಷ ವ್ಯಕ್ತಿ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಪ್ರಕರಣ ಸೇರಿ ಜಿಲ್ಲೆಯಲ್ಲಿ ಇದುವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 128ಕ್ಕೇರಿಕೆಯಾಗಿದೆ.
ಶುಕ್ರವಾರ ಜಿಲ್ಲೆಯಲ್ಲಿ ಪತ್ತೆಯಾಗಿರುವ 129 ಪಾಸಿಟಿವ್ ಪ್ರಕರಣಗಳ ಪೈಕಿ 105 ಮಂದಿಯನ್ನು ಹೋಮ್ ಐಸೋಲೇಶನ್ ಮಾಡಲಾಗಿದ್ದು, 5 ಮಂದಿಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದಾಖಲಿಸಲಾಗಿದೆ. 19 ಮಂದಿಯನ್ನು ಕೋವಿಡ್ ಆಸ್ಪತ್ರೆಗಳಿಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
129 ಪಾಸಿಟಿವ್ ಪ್ರಕರಣಗಳು ಸೇರಿ ಜಿಲ್ಲೆಯಲ್ಲಿ ಇದುವರೆಗೆ ಪತ್ತೆಯಾದ ಒಟ್ಟು ಸೋಂಕಿತರ ಸಂಖ್ಯೆ 10155ಕ್ಕೇರಿಕೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 1375 ಸಕ್ರೀಯ ಪ್ರಕರಣಗಳಿವೆ. ಶುಕ್ರವಾರ ಚಿಕಿತ್ಸೆಯಿಂದ ಗುಣಮುಖರಾದ 167 ಮಂದಿಯನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದ್ದು, ಇದುವರೆಗೆ ಚಿಕಿತ್ಸೆಯಿಂದ 8485 ಮಂದಿ ಗುಣಮುಖರಾಗಿದ್ದಾರೆ. ಸೋಂಕಿಗೆ 128 ಮಂದಿ ಜಿಲ್ಲೆಯಲ್ಲಿ ಬಲಿಯಾಗಿದ್ದಾರೆ.