ಸಚಿವ ಆನಂದ್ ಸಿಂಗ್ ನಿವಾಸದ ಸುತ್ತ ಮುತ್ತ ವಾಹನಗಳ ಸಂಚಾರಕ್ಕೆ ನಿರ್ಬಂಧ !
ಹೊಸಪೇಟೆ, ಅ.10: ಅರಣ್ಯ ಸಚಿವ ಆನಂದ್ ಸಿಂಗ್ ನಿವಾಸದ ಮೇಲೆ ಧೂಳು ಆವರಿಸುತ್ತಿದೆ ಎಂಬ ಹಿನ್ನೆಲೆಯಲ್ಲಿ ಹೊರ ವರ್ತುಲ ರಸ್ತೆಯಲ್ಲಿ ಲಾರಿ ಸೇರಿ ಸರಕು ಸಾಗಾಣಿಕೆ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಸರಕು ಸಾಗಣೆ ವಾಹನಗಳ ಸಂಚಾರ ತಡೆಗೆ ಹೊರವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಿದ್ದಾರೆ. ಅಲ್ಲೆಲ್ಲ ಸಂಚಾರ ಪೊಲೀಸರನ್ನು ನಿಯೋಜಿಸಲಾಗಿದೆ. ಪೊಲೀಸರು ಹಗಲು ರಾತ್ರಿ ಮೂರು ಪಾಳಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ವರ್ತುಲ ರಸ್ತೆಯ ಈ ಭಾಗದಲ್ಲಿ ಸಂಚಾರ ನಿರ್ಬಂಧಿಸಿರುವ ಕಾರಣ ಭಾರೀ ವಾಹನಗಳು ನಗರದ ಮಧ್ಯದಿಂದ ಸಂಚರಿಸುತ್ತಿವೆ. ಉಕ್ಕಿನ ಕೈಗಾರಿಕೆಗಳು, ಬಾಳೆ, ಭತ್ತ ಹಾಗೂ ಕಬ್ಬಿನ ಗದ್ದೆಗಳಿಂದ ಕೃಷಿ ಉತ್ಪನ್ನಗಳನ್ನು ಇದೇ ಮಾರ್ಗದಲ್ಲಿ ಸಾಗಿಸಲಾಗುತ್ತಿತ್ತು. ಈ ವಾಹನಗಳು ಈಗ ಸುತ್ತು ಬಳಸಿ ಹೋಗುವಂತಾಗಿದೆ. ಸಂಚಾರ ನಿರ್ಬಂಧಿಸಿದ್ದನ್ನು ವಿರೋಧಿಸಿ ಇತ್ತೀಚೆಗೆ ರೈತರು ಪೊಲೀಸರೊಂದಿಗೆ ಜಟಾಪಟಿಗೂ ಇಳಿದಿದ್ದರು.
ಭಾರೀ ವಾಹನಗಳೆಲ್ಲ ಸಂಚರಿಸುತ್ತಿರುವ ಕಾರಣ ನಗರ ಪರಿಮಿತಿಯಲ್ಲಿ ಈಗ ವಾಹನ ದಟ್ಟಣೆ ಕಂಡು ಬರುತ್ತಿದೆ. ಪೊಲೀಸರ ಈ ಕ್ರಮಕ್ಕೆ ರೈತರು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಹೊರವರ್ತುಲ ರಸ್ತೆ ಇರುವುದೇ ಭಾರೀ ವಾಹನಗಳ ಸಂಚಾರಕ್ಕಾಗಿ. ಅಲ್ಲಿ ನಿರ್ಬಂಧ ಹೇರಿದ್ದು ಅಧಿಕಾರ ದುರುಪಯೋಗದ ಪರಮಾವಧಿ. ‘ರಿಪಬ್ಲಿಕ್ ಆಫ್ ಬಳ್ಳಾರಿ’ಯ ಇನ್ನೊಂದು ಮುಖ. ಹಿಂದೆ ಐಎಸ್ಆರ್ ಸಕ್ಕರೆ ಕಾರ್ಖಾನೆ ಮುಚ್ಚಿಸಲಾಗಿತ್ತು. ಈಗ, ತಮ್ಮ ಬಂಗಲೆಗೆ ದೂಳು ಆವರಿಸುತ್ತದೆ ಎಂದು ಸಂಚಾರ ನಿರ್ಬಂಧಿಸಿರುವುದು ಸಚಿವರ ಸರ್ವಾಧಿಕಾರಿ ಧೋರಣೆಯಲ್ಲದೆ ಮತ್ತೇನೂ ಇಲ್ಲ. ರೈತರೆಲ್ಲ ಸೇರಿ ಇದರ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡ ಸಣ್ಣಕ್ಕಿ ರುದ್ರಪ್ಪ ತಿಳಿಸಿದ್ದಾರೆ.
ಭಾರೀ ವಾಹನಗಳು ಹೊರವರ್ತುಲ ರಸ್ತೆಯಲ್ಲಿ ಸಂಚರಿಸಿದರೆ ಉತ್ತಮ. ನಿರ್ಬಂಧ ಹೇರಿದ್ದು ಸರಿಯಲ್ಲ, ಮೇಲಿನ ಅಧಿಕಾರಿಗಳ ಸೂಚನೆ ಪಾಲಿಸುತ್ತಿದ್ದೇವೆ. ಧೂಳು, ಶಬ್ದ ಮಾಲಿನ್ಯದಿಂದ ಕಿರಿಕಿರಿ ಉಂಟಾಗುತ್ತಿರುವ ಕಾರಣ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ’ ಎಂದು ಹೆಸರು ಹೇಳಲಿಚ್ಛಿಸದ ಸಂಚಾರ ಪೊಲೀಸರೊಬ್ಬರು ತಿಳಿಸಿದ್ದಾರೆ.