ನಿವೇಶನ ರಹಿತರಿಗೆ ಭೂಮಿಗಾಗಿ ಅ.12ರಿಂದ ಧರಣಿ ಸತ್ಯಾಗ್ರಹ
ಮಂಡ್ಯ, ಅ.10: ಬೂದನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗುರುತಿಸಿರುವ ಸರಕಾರಿ ಭೂಮಿಯನ್ನು ಅಳತೆ ಮಾಡಿ ನಿವೇಶನ ರಹಿತರಿಗೆ ವಿತರಿಸಲು ಒತ್ತಾಯಿಸಿ ಅ.12ರಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಅರಂಭಿಸಿ ನ್ಯಾಯ ಸಿಗುವವರೆಗೂ ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದು ಬೂದನೂರು ಗ್ರಾಪಂ ಮಾಜಿ ಸದಸ್ಯ ಬಿ.ಕೆ.ಸತೀಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಳ್ಳು ಮಾಹಿತಿ ನೀಡುತ್ತಿರುವ ರಾಜಸ್ವ ನಿರೀಕ್ಷಕ(ಆರ್.ಐ), ಗ್ರಾಮ ಲೆಕ್ಕಿಗರು(ವಿ.ಎ) ಹಾಗೂ ಭೂಮಾಪನ ಇಲಾಖೆ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು. ತಕ್ಷಣವೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಿವೇಶನರಹಿತರ ಸಭೆ ಆಯೋಜಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಕಚೇರಿಯಲ್ಲಿ ಬೂದನೂರು ನಿವೇಶನ ರಹಿತರಿಗೆ ಭೂಮಿ ಮಂಜೂರು ಮಾಡುವ ಸಂಬಂಧದ ಕಡತಗಳನ್ನೇ ಅಧಿಕಾರಿಗಳು ಬಚ್ಚಿಟ್ಟು ಕಳೆದುಹೋಗಿದೆ ಎನ್ನುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಕಳೆದ 4 ವರ್ಷಗಳಿಂದ ಬೂದನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ 50 ಎಕರೆ ಸರಕಾರಿ ಭೂಮಿಯಲ್ಲಿ 2 ಎಕರೆ ಮಂಜೂರು ಮಾಡುವ ಸಂಬಂಧ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಅವರು ದೂರಿದರು.
ಬೂದನೂರು ಗ್ರಾಮದ ದಲಿತರ ಇನಾಮು, ಸರಕಾರಿ ಶಾಲೆ ಹಾಗೂ ಸಾರ್ವಜನಿಕ ದಾರಿಗಳನ್ನು ಕಬಳಿಸಿರುವ ಭೂಗಳ್ಳರು ಬಡವರ ನಿವೇಶನ ಭೂಮಿಯನ್ನು ಕಬಳಿಸಲು ಸಂಚು ರೂಪಿಸಿದ್ದಾರೆ ಎಂದು ಅವರು ಆರೋಪಿಸಿದರು.