ವ್ಯಾಪಾರಿಯ ಹತ್ಯೆ ಪ್ರಕರಣ: ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಹಾವೇರಿ, ಅ. 11: ಗೋಣಿ ಚೀಲ ಮಾರಿ ಬದುಕು ಕಟ್ಟಿಕೊಂಡಿದ್ದ ವ್ಯಾಪಾರಿಯೊಬ್ಬನನ್ನು ಕೊಲೆ ಮಾಡಿ ಆತನ ಬಳಿಯಿದ್ದ ಹಣ ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದ ಮೂವರು ಆರೋಪಿಗಳಿಗೆ ಹಾವೇರಿ 2ನೆ ಅಧೀನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 5 ಸಾವಿರ ರೂ.ದಂಡ ವಿಧಿಸಿ ಆದೇಶ ಹೊರಡಿಸಿದೆ.
ಹಿರೇಕೆರೂರ ತಾಲೂಕಿನ ಚಿನ್ನಮುಳಗುಂದ ಗ್ರಾಮದ ಸತೀಶ ನಾಗಪ್ಪ ಕುಬಸದ, ಕುಮಾರ ಬಸಪ್ಪ ಓಲೇಕಾರ, ಹನುಮಂತಪ್ಪ ಗುಡ್ಡಪ್ಪ ನಾಡ್ಲೇರ ಶಿಕ್ಷೆಗೊಳಗಾದ ಆರೋಪಿಗಳು. ಈ ಎಲ್ಲ ಅಪರಾಧಿಗಳು 2014ರ ಆ.24ರಂದು ಚಿನ್ನಮುಳಗುಂದ ಗ್ರಾಮದ ಗೋಣಿ ಚೀಲದ ವ್ಯಾಪಾರಿ ಚನ್ನಬಸಪ್ಪ ಗೋಕಾವಿ(85)ಎಂಬುವರ ಮನೆಗೆ ಹಣ ದೋಚಲು ಹೋಗಿದ್ದರು. ಈ ಸಮಯದಲ್ಲಿ ಚನ್ನಬಸಪ್ಪ ಎಚ್ಚರಗೊಂಡಾಗ, ಅವರ ತಲೆಗೆ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಕೊಲೆ ಘಟನೆ ಬೆಳಕಿಗೆ: ಚನ್ನಬಸಪ್ಪ ಕೊಲೆಯಾದ ಬಳಿಕವೂ ಸಾಮಾನ್ಯ ಸಾವಾಗಿರಬಹುದು ಎಂಬ ಕಾರಣದಿಂದ ಮೊದಲಿಗೆ ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿರಲಿಲ್ಲ. ಕೆಲ ದಿನಗಳ ಬಳಿಕ ಕೊಲೆ ಮಾಡಿದ 1ನೆ ಆರೋಪಿ ಸತೀಶ, ಚನ್ನಬಸಪ್ಪನ ಫೋನ್ನಿಂದ ಗ್ರಾಮದ ಜನರಿಗೆ ಕರೆ ಮಾಡಿ ಮಾತನಾಡಿದ್ದನು. ಈ ಬಗ್ಗೆ ಸಂಶಯಗೊಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ಮಾಹಿತಿಯನ್ನು ಆಧರಿಸಿ ಈ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಕುರಿತು ಹಿರೇಕೆರೂರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ಕೋರ್ಟ್ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸಾಕ್ಷ್ಯಾಧಾರಗಳ ಸಮೇತ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಪೀಠವು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದೆ.