ಭಾರೀ ಮಳೆ: ಆಶ್ರಯ ಪಡೆದಿದ್ದ ಸರಕಾರಿ ಶಾಲೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ
ಸಾಂದರ್ಭಿಕ ಚಿತ್ರ
ಕಲಬುರಗಿ, ಅ.14: ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಎಡಬಿಡದೆ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬುಧವಾರ ತುಂಬು ಗರ್ಭಿಣಿಯೊಬ್ಬರು ಪ್ರವಾಹ ಭೀತಿಯಿಂದಾಗಿ ಮನೆ ತೊರೆದು ಚಿಂಚೋಳಿ ತಾಲೂಕಿನ ನಾಗಾಈದಲಾಯಿ ಗ್ರಾಮದ ಸರಕಾರಿ ಶಾಲೆಯಲ್ಲಿ ಆಶ್ರಯ ಪಡೆದಾಗಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.
ಗ್ರಾಮದ ಕೆರೆ ಒಡೆದಿದ್ದರಿಂದ ಊರಿಗೆ ಪ್ರವಾಹದ ನೀರು ನುಗ್ಗಿದೆ. ಕೆರೆ ಒಡೆದ ಸುದ್ದಿ ತಿಳಿದು ಜನ ತಂಡೋಪ ತಂಡವಾಗಿ ಮನೆಗಳನ್ನು ತೊರೆದಿದ್ದಾರೆ. ಆಗ ತುಂಬು ಗರ್ಭಿಣಿ ಗೀತಾ ವೆಂಕಟ ಹೆಳವರ ಭಯದಿಂದ ಶಾಲೆಯ ಕಟ್ಟಡದತ್ತ ದೌಡಾಯಿಸಿದ್ದಾರೆ. ಇದೇ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಗ ಅವರ ತಂದೆಯ ಹಿರಿಯ ಅಜ್ಜಿ ನಾಗಮ್ಮ ಹೆಳವರ ಸಹಜ ಹೆರಿಗೆ ಮಾಡಿಸಿದ್ದಾರೆ.
ಗೀತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ. ಗೀತಾ ಅವರಿಗೆ ಇದು ಮೊದಲ ಹೆರಿಗೆಯಾಗಿದೆ. ಸದ್ಯ ತಾಯಿ, ಮಗುವನ್ನು ತಾಲೂಕಿನ ಸಾಲೇಬೀರನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ.