ಕೋವಿಡ್ ನಿಂದ ಗುಣಮುಖರಾದ ಶಿಕ್ಷಣ ಸಚಿವ ಸುರೇಶ್ ಕುಮಾರ್
ಬೆಂಗಳೂರು, ಅ.18: ವೈದ್ಯರ ಆರೈಕೆಯಿಂದ ಕೋವಿಡ್ನಿಂದ ಗುಣಮುಖನಾಗಿ ಶನಿವಾರ ರಾತ್ರಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದೇನೆ. ಇನ್ನು ಎರಡು ವಾರಗಳ ಕಾಲ ಮನೆಯಲ್ಲಿಯೇ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಫೇಸ್ಬುಕ್ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿರುವ ಅವರು, ಅ.5ರಂದು ನನಗೆ ಕೊರೋನ ಸೋಂಕು ತಗಲಿರುವುದು ಗೊತ್ತಾಯಿತು. ನಂತರ ವೈದ್ಯರ ಸಲಹೆಯಂತೆ ನಾನು ಮನೆಯಲ್ಲಿಯೇ ಐಸೋಲೇಷನ್ನಲ್ಲಿದ್ದೆ. ಆದರೆ, ಅ.10ರಂದು ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾದೆ ಎಂದು ಹೇಳಿದ್ದಾರೆ.
ಎಂಟು ದಿನಗಳಿಂದ ನನಗೆ ಎಲ್ಲ ರೀತಿಯ ಚಿಕಿತ್ಸೆ ನೀಡಿ ಗುಣಮುಖನಾಗುವ ಹಾದಿಗೆ ತಂದ ಡಾ.ಶಶಾಂಕ್, ಡಾ.ಶ್ರೀನಾಥ್, ಡಾ.ಪೂರ್ಣ ಪ್ರಸಾದ್, ಡಾ.ಕೃಪೇಶ್ ಮತ್ತು ಎಲ್ಲ ದಾದಿಯರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ಇನ್ನೂ ಎರಡು ವಾರಗಳ ಕಾಲ ಮನೆಯಿಂದ ಹೊರಗೆ ಹೋಗಬಾರದೆಂಬ ಷರತ್ತಿನ ಮೇಲೆ ನನ್ನನ್ನು ಬಿಡುಗಡೆ ಮಾಡಿದ್ದಾರೆಂದು ಅವರು ತಿಳಿಸಿದ್ದಾರೆ.
Next Story