ಬೇರೊಬ್ಬನೊಂದಿಗೆ ನಡೆದ ನಿಶ್ಚಿತಾರ್ಥ ಪ್ರಶ್ನಿಸಿದ ಪ್ರಿಯತಮನ ಮೇಲೆ ಹಲ್ಲೆ: ಆರೋಪಿ ವಶಕ್ಕೆ
ಕೊಳ್ಳೇಗಾಲ, ಅ.19: ಪ್ರೀತಿಸಿ ಬೇರೊಬ್ಬನೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದ ಯುವತಿಯನ್ನು ಪ್ರಶ್ನಿಸಿದ ಪ್ರಿಯತಮ ಹಾಗೂ ಆತನ ಸಹೋದರರಿಗೆ ಯುವತಿಯ ಅಣ್ಣ ಚಾಕುವಿನಿಂದ ಇರಿದು ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಜಾಗೇರಿಯಲ್ಲಿ ನಡೆದಿದೆ.
ಗ್ರಾಮದ ಜಾರ್ಜ್ ಪ್ರಕಾಶ್ ಹಾಗೂ ಈತನ ಸಹೋದರಾರದ ಪೀಟರ್ ಜಾನ್ ಪಾಲ್, ಜೊಸೆಫ್ ಸ್ಟಾಲಿನ್ ಹಾಗೂ ಅದೇ ಗ್ರಾಮದ ಸ್ನೇಹಿತ ಜಾನ್ಸನ್ ಸಂತೋಷ್ ಚಾಕುವಿನ ಇರಿತಕ್ಕೆ ಒಳಗಾದವರು.
ಜಾಗೇರಿ ಗ್ರಾಮದ ಥಾಮಸ್ ಎಂಬವರ ಮಗಳಾದ ಮೇರಿ ಸ್ನೇಹಾ ಹಾಗೂ ಜಾರ್ಜ್ ಪ್ರಕಾಶ್ ಸುಮಾರು ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ ಇದೀಗ ಅದೇ ಗ್ರಾಮದ ಜಯಶೀಲ್ ಎಂಬವನ ಜೊತೆ ಮೇರಿ ಸ್ನೇಹಾಳ ನಿಶ್ಚಿತಾರ್ಥ ಮಾಡಲು ಮುಂದಾಗಿದ್ದ ಕುರಿತು ಪ್ರಶ್ನಿಸಿದಾಗ ಯುವತಿಯ ಅಣ್ಣ ಐಜಾಕ್ ರಾಬಿನ್ ಕುಪಿತಗೊಂಡು ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ನಾಲ್ವರನ್ನು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ. ಸದ್ಯ ಆರೋಪಿ ಐಜಾಕ್ ರಾಬಿನ್ನ್ನು ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.