ಎನ್.ಎ. ಮುತ್ತಣ್ಣ ಪೊಲೀಸ್ ವಸತಿ ಶಾಲೆ ಸಬಲೀಕರಣಕ್ಕೆ ಬಸವರಾಜ ಹೊರಟ್ಟಿ ಒತ್ತಾಯ
ಬೆಂಗಳೂರು, ಅ.21: ಧಾರವಾಡದಲ್ಲಿರುವ ಎನ್.ಎ.ಮುತ್ತಣ್ಣ ಪೊಲೀಸ್ ಮಕ್ಕಳ ವಸತಿ ಶಾಲೆಯನ್ನು ಸಬಲೀಕರಣಗೊಳಿಸುವ ಮೂಲಕ ವಿದ್ಯಾರ್ಥಿಗಳ ಪ್ರವೇಶಾತಿ ಹಾಗೂ ಸಿಬ್ಬಂದಿಗಳ ವೇತನ ನೀಡುವುದರ ಕುರಿತು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ.
ಈ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿರುವ ಅವರು, ಉತ್ತರ ಕರ್ನಾಟಕದ ಭಾಗದಲ್ಲಿ ಎನ್.ಎ.ಮುತ್ತಣ್ಣ ಪೊಲೀಸ್ ಮಕ್ಕಳ ವಸತಿ ಶಾಲೆ ಮಾದರಿ ಶಾಲೆಯಾಗಿತ್ತು. ಶೇ.100ರಷ್ಟು ಫಲಿತಾಂಶ ಬರುತ್ತಿತ್ತು. ಆದರೆ, ಕೆಲವು ಭ್ರಷ್ಟ ಪೊಲೀಸ್ ಅಧಿಕಾರಿಗಳ ನೀತಿ ಗಳಿಂದಾಗಿ ಈ ಶಾಲೆ ಮುಚ್ಚುವ ಹಂತಕ್ಕೆ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಶಾಲೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿ ಸದೃಢಗೊಳಿಸಿ ಎಂದು ಮನವಿ ಮಾಡಿದರೆ, ಪೊಲೀಸ್ ಅಧಿಕಾರಿಗಳು ಈ ಶಾಲೆಯನ್ನು ಮುಚ್ಚುವ ಮಾತನಾಡುತ್ತಾರೆ. ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಈ ಶಾಲೆ ಪ್ರಾರಂಭವಾಗಿದೆ. ಹೀಗಾಗಿ ಅವರ ಮಗ ಬಸವರಾಜ ಬೊಮ್ಮಾಯಿ ಗೃಹ ಮಂತ್ರಿಗಳಾಗಿರುವ ಸಂದರ್ಭದಲ್ಲಿ ಈ ಶಾಲೆಯನ್ನು ಮುಚ್ಚುವುದಕ್ಕೆ ಅವಕಾಶ ಮಾಡಿಕೊಡಬಾರದೆಂದು ಅವರು ಒತ್ತಾಯಿಸಿದ್ದಾರೆ.
ಎನ್.ಎ.ಮುತ್ತಣ್ಣ ಪೊಲೀಸ್ ಮಕ್ಕಳ ವಸತಿ ಶಾಲೆಯ ಶಿಕ್ಷಕರಿಗೆ 8ತಿಂಗಳಿನಿಂದ ಸಂಬಳ ಆಗಿಲ್ಲ. ಒಬ್ಬ ಶಿಕ್ಷಕರಿಗೆ ಮೂರು ಜನ ಬುದ್ಧಿಮಾಂದ್ಯ ಹೆಣ್ಣು ಮಕ್ಕಳಿದ್ದು, ವೇತನವಿಲ್ಲದ್ದರಿಂದ ಮಕ್ಕಳ ಪೋಷಣೆಗೆ, ಆಸ್ಪತ್ರೆಯ ಖರ್ಚಿಗೆ ಹಣಕಾಸಿನ ಸಮಸ್ಯೆ ಉಂಟಾಗಿದೆ. ಮತ್ತೊಬ್ಬ ಶಿಕ್ಷಕರ ಪತ್ನಿ ಮನೆ ನಡೆಸುವುದು ಕಷ್ಟವಾದ್ದರಿಂದ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಹೀಗಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಈ ಬಗ್ಗೆ ವಿಶೇಷ ಆಸಕ್ತಿವಹಿಸಿ ವೇತನ ಬಿಡುಗಡೆ ಹಾಗೂ ಶಾಲೆಯ ಸಬಲೀಕರಣಕ್ಕೆ ಮುಂದಾಗಬೇಕೆಂದು ಅವರು ಒತ್ತಾಯಿಸಿದ್ದಾರೆ.