ಮೈಸೂರು: ಕಾಡಾನೆ ತುಳಿಕ್ಕೆ ಆದಿವಾಸಿ ಯುವಕ ಮೃತ್ಯು
ಮೈಸೂರು, ಅ. 21: ಕಾಡಾನೆ ತುಳಿತಕ್ಕೆ ಆದಿವಾಸಿ ಯುವಕ ಸಾವಿಗೀಡಾಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹೆಡಿಯಾಲ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.
ಆನೆ ತುಳಿತಕ್ಕೆ ಒಳಗಾದ ವ್ಯಕ್ತಿ ಕೆಂಪ ಮತ್ತು ಚಿಕ್ಕಮ್ಮ ದಂಪತಿ ಪುತ್ರ ಗಣೇಶ್ (25) ಎಂದು ಹೇಳಲಾಗಿದೆ.
ಈತ ತಡ ರಾತ್ರಿ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೆ ಬರುವ ಬಂಕಳ್ಳಿ ರಸ್ತೆ ಮಾರ್ಗದಲ್ಲಿ ಮನೆಗೆ ಬರುತ್ತಿದ್ದ ವೇಳೆ ವೆಂಕಟಗಿರಿ ಕಾಲನಿ ಮತ್ತು ಡೋರನಕಟ್ಟೆ ಕಾಲನಿ ಮಧ್ಯೆ ಕಾಡನೆ ತುಳಿತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಎ.ಸಿ.ಫ್ ರವಿಕುಮಾರ್ ಮತ್ತು ಆರ್.ಎಫ್.ಓ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮೃತದೇಹವನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಬಳಿಕ ಮೃತ ಕುಟುಂಬಸ್ಥರಿಗೆ ಸರ್ಕಾರದಿಂದ ನೀಡುವ ಏಳುವರೆ ಲಕ್ಷ ರೂ. ಗಳ ಪರಿಹಾರದ ಚೆಕ್ ಅನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಹುಲ್ಲಹಳ್ಳಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುರೇಂದ್ರ, ಎಎಸ್ಐ ಮನೋರಮ, ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಮಹಮದ್ ಸಫೀರ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.