ಕೊರೋನ ವಾರಿಯರ್ ಮೇಲೆ ಹಲ್ಲೆ: ನಾಲ್ವರ ವಿರುದ್ಧ ಎಫ್ಐಆರ್
ಬಾಗಲಕೋಟೆ, ಅ.22: ಊರಲ್ಲಿ ತಮ್ಮ ಮರ್ಯಾದೆ ಹಾಳಾಗಿದೆ ಎಂದು ಆರೋಪಿಸಿ ಕೊರೋನ ಸೋಂಕಿತ ಮಹಿಳೆಯ ಕುಟುಂಬಸ್ಥರು ನರ್ಸ್ ಮೇಲೆ ಹಲ್ಲೆ ನಡೆಸಿರುವ ಘಟನೆ ಬಾದಾಮಿ ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ.
ರಾಜೇಶ್ವರಿ ಮ್ಯಾಗಿನಮನಿ(47) ಹಲ್ಲೆಗೊಳಗಾದ ನರ್ಸ್. ಕೆರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸರಕಾರಿ ಮಹಿಳಾ ಕಿರಿಯ ಆರೋಗ್ಯ ಸಹಾಯಕಿಯಾಗಿ ರಾಜೇಶ್ವರಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೊರೋನ ಸೋಂಕು ಪರೀಕ್ಷಾ ವರದಿಯಲ್ಲಿ ಇಂದ್ರವ್ವಗೆ ನೆಗೆಟಿವ್ ಬಂದಿತ್ತು. ಆದರೆ ಕೊರೋನ ಸೋಂಕು ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂದ್ರವ್ವಗೆ ಮನೆಯಲ್ಲಿ ಕ್ವಾರಂಟೈನ್ ಆಗಲು ನರ್ಸ್ ರಾಜೇಶ್ವರಿ ಹೇಳಿದ್ದರು.
ಮನೆಯಲ್ಲಿ ಕ್ವಾರಂಟೈನ್ ಆಗಲು ನರ್ಸ್ ಹೇಳಿದ್ದರಿಂದ, ಊರಿನಲ್ಲಿ ನಮ್ಮ ಕುಟುಂಬದ ಮರ್ಯಾದೆ ಹೋಗಿದೆ ಎಂದು ಕೊರೋನ ಸೋಂಕಿತ ಮಹಿಳೆಯ ಕುಟುಂಬಸ್ಥರು ಗುಂಪು ಸೇರಿ ನರ್ಸ್ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಹಲ್ಲೆಗೊಳಗಾದ ನರ್ಸ್ ರಾಜೇಶ್ವರಿ ಮ್ಯಾಗಿನಮನಿ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಸಂಬಂಧ ಇಂದ್ರವ್ವನ ಕುಟುಂಬದ ನಾಲ್ವರ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.