ಹಣ ಪಡೆದು ಕೊರೋನ ವರದಿ ನೆಗೆಟಿವ್ ನೀಡುವವರ ವಿರುದ್ಧ ಕ್ರಮ ನಿಶ್ಚಿತ: ಸಚಿವ ಡಾ. ಸುಧಾಕರ್
ಬೆಂಗಳೂರು, ಅ.22: ನಗರದ ಕೆಲ ಲ್ಯಾಬ್ ಹಾಗೂ ಆಸ್ಪತ್ರೆಗಳಲ್ಲಿ ಹಣ ಪಡೆದು ಕೊರೋನ ವರದಿ ನೆಗೆಟಿವ್ ಎಂದು ನೀಡುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ತಪ್ಪು ವರದಿ ನೀಡುತ್ತಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ವ್ಯಕ್ತಿಗಳು ಹಣ ಪಡೆದು ತಪ್ಪು ವರದಿ ನೀಡಬಾರದು. ಹಾಗೆ ಕೊಟ್ಟಿದ್ದರೆ ನಿಜಕ್ಕೂ ಕಾನೂನು ರೀತಿ ತಪ್ಪು. ಅಕ್ರಮವಾಗಿ ಹಣ ಗಳಿಸಲು ತಪ್ಪು ವರದಿ ಕೊಟ್ಟಿದ್ದರೆ ಖಂಡಿತ ಕ್ರಮ ಕೈಗೊಳುತ್ತೇವೆ ಎಂದು ಹೇಳಿದರು.
ಈ ಬಗ್ಗೆ ಎಲ್ಲಾ ಲ್ಯಾಬ್ ಹಾಗೂ ಆಸ್ಪತ್ರೆಗಳಿಗೆ ಆದೇಶ ಹೊರಡಿಸುತ್ತಿದ್ದೇವೆ. ರ್ಯಾಪಿಡ್ ಪರೀಕ್ಷೆ ನಡೆಸುವಾಗ ಕೆಲವು ತಾಂತ್ರಿಕ ಸಮಸ್ಯೆಗಳು ಇರುವುದು ಗಮನಕ್ಕೆ ಬಂದಿದೆ. ಆದರೆ, ಅಕ್ರಮವಾಗಿ ತಪ್ಪು ವರದಿ ಕೊಡುತ್ತಿರುವ ಕುರಿತು ಮಾಧ್ಯಮಗಳಿಂದ ಮಾಹಿತಿ ಸಿಕ್ಕಿದೆ. ಈ ರೀತಿ ದುರುದ್ದೇಶಪೂರ್ವಕವಾಗಿ ಯಾರು ಮಾಡುತ್ತಾರೋ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.