ಮುಂದಿನ ಸಿಎಂ ಯಾರೆಂದು ಶಾಸಕಾಂಗ ಪಕ್ಷ ತೀರ್ಮಾನಿಸಲಿದೆ: ಸಿದ್ದರಾಮಯ್ಯ
ಬೀದರ್, ಅ. 26: `ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರು ಮುಖ್ಯಮಂತ್ರಿಯಾಗುತ್ತಾರೆ ಎನ್ನುವುದನ್ನು ಶಾಸಕಾಂಗ ಪಕ್ಷ ಮತ್ತು ಹೈಕಮಾಂಡ್ ನಿರ್ಧರಿಸುತ್ತದೆ. ಉಳಿದವರು ಏನೇ ಹೇಳಿದರೂ ಇದೇ ಸತ್ಯ. ಇದನ್ನು ನಾನೇ ಹೇಳುತ್ತಿರುವುದರಿಂದ ಇದರ ಬಗ್ಗೆ ಬೇರೆ ಚರ್ಚೆಯೇ ಇಲ್ಲ' ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಣೆ ನೀಡಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಕಾಂಗ್ರೆಸ್ ಪಕ್ಷದಲ್ಲಿ ಯಾವ ಭಿನ್ನಮತವೂ ಇಲ್ಲ. ಅವೆಲ್ಲ ನಡೆಯುತ್ತಿರುವುದು ಬಿಜೆಪಿಯಲ್ಲಿ. ಮುಖ್ಯಮಂತ್ರಿಗಳ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿರುವ ಬಿಜೆಪಿಯ ಶಾಸಕರ ವಿರುದ್ದ ಕ್ರಮ ಕೈಗೊಳ್ಳುವ ತಾಕತ್ತು ಆ ಪಕ್ಷಕ್ಕಿಲ್ಲ. ನಮ್ಮ ಬಗ್ಗೆ ಮಾತನಾಡುವ ಯಾವ ನೈತಿಕ ಹಕ್ಕಿದೆ?' ಎಂದು ವಾಗ್ದಾಳಿ ನಡೆಸಿದರು.
"ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾವಿಬಟ್ಟೆ ಬದಲಾಯಿಸುವುದು ಒಳ್ಳೆಯದು. ಅವರಿಂದಾಗಿ ಆ ಬಟ್ಟೆಗೆ ಕಳಂಕ ಬಂದಿದೆ. 27 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಮುಖ್ಯಮಂತ್ರಿಯ ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಇರಲು ಹೇಗೆ ಸಾಧ್ಯ? ಅವರಿಗೆ ಕಾವಿ ಬಟ್ಟೆ ಶೋಭಿಸುವುದಿಲ್ಲ" ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ತಿರುಗೇಟು ನೀಡಿದರು.