ಶೀಘ್ರದಲ್ಲಿಯೇ ನಿವೃತ್ತಿ: ಹಿರಿಯ ಐಪಿಎಸ್ ಅಧಿಕಾರಿಗಳಿಗೆ ಬೀಳ್ಕೊಡುಗೆ
ಬೆಂಗಳೂರು, ಅ.29: ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿಗಳಾದ ಟಿ.ಸುನೀಲ್ ಕುಮಾರ್, ಎ.ಎಂ.ಪ್ರಸಾದ್ ಅವರು ಶೀಘ್ರದಲ್ಲಿಯೇ ನಿವೃತ್ತಿ ಹೊಂದುತ್ತಿರುವ ಹಿನ್ನೆಲೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಗುರುವಾರ ನಗರದ ಕೋರಮಂಗಲದ ಕೆಎಸ್ಆರ್ಪಿ ಮೈದಾನದಲ್ಲಿ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೆಶಕ ಪ್ರವೀಣ್ ಸೂದ್ ಅವರು ಹಿರಿಯ ಐಎಎಸ್ ಅಧಿಕಾರಿಗಳಿಗೆ ಸರಕಾರಿ ಗೌರವದ ಮೂಲಕ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಈ ಇಬ್ಬರು ಸಹ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಇಂದು ನಿವೃತ್ತಿಯಾಗುತ್ತಿದ್ದಾರೆ. ಅವರಿಗೆ ಪೊಲೀಸ್ ಇಲಾಖೆಯಿಂದ ಅಭಿನಂದನೆ ಸಲ್ಲಿಸುತ್ತೇನೆ. ಅವರ ಜೊತೆ ಯಾವಾಗಲೂ ಬೆಂಬಲವಾಗಿ ನಾವು ಇರುತ್ತೇವೆ ಎಂದು ನುಡಿದರು.
ಆನಂತರ ಟಿ.ಸುನೀಲ್ ಕುಮಾರ್ ಮಾತನಾಡಿ, ಕರ್ನಾಟಕ ನಮಗೆ ಬಹಳ ಪ್ರೀತಿಯನ್ನು ಕೊಟ್ಟಿದೆ, ಬಹಳ ಕಡೆ ಸೇವೆ ಸಲ್ಲಿಸಿದ್ದು, ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವುದು ಖುಷಿಯ ವಿಚಾರ. ಎಲ್ಲಾ ಸಿಬ್ಬಂದಿ ನಮಗೆ ಸಹಕಾರ ನೀಡಿದ್ದಾರೆ ಎಂದು ಎ.ಎಂ.ಪ್ರಸಾದ್ ತಿಳಿಸಿದರು.
ಬುಧವಾರ ಟಿ.ಸುನೀಲ್ ಕುಮಾರ್ ಅವರನ್ನು ಎಸಿಬಿ ಎಡಿಜಿಪಿ ಹುದ್ದೆಯಿಂದ ಸಿಐಡಿ ವಿಶೇಷ ಹಾಗೂ ಆರ್ಥಿಕ ಅಪರಾಧ ವಿಭಾಗದ ಡಿಜಿಪಿ ಆಗಿ ನೇಮಿಸಿ ಭಡ್ತಿ ನೀಡಲಾಗಿತ್ತು. ಈ ತಿಂಗಳ ಅಂತ್ಯಕ್ಕೆ ಅವರು ನಿವೃತ್ತಿಯಾಗಲಿದ್ದಾರೆ.
ಜೊತೆ ಎ.ಎಂ.ಪ್ರಸಾದ್ ಕೂಡ ನಿವೃತ್ತಿಯಾಗಿದ್ದಾರೆ. ಪೊಲೀಸ್ ಇಲಾಖೆಯ ಡಿಜಿ ಹುದ್ದೆಗೆ ಇವರು ನೇಮಕ ಆಗಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಕೊನೆ ಕ್ಷಣದಲ್ಲಿ ಪ್ರವೀಣ್ ಸೂದ್ ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಾಗಿ ಆಯ್ಕೆಯಾಗಿದ್ದರು.