120 ಟನ್ 'ಅನ್ನಭಾಗ್ಯ' ಅಕ್ಕಿ ಅಕ್ರಮ ಸಾಗಾಟ: 8 ಮಂದಿಯ ಬಂಧನ
ಸಾಂದರ್ಭಿಕ ಚಿತ್ರ
ಯಾದಗಿರಿ, ಅ.31: ಅನ್ಯಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಅನ್ಯ ರಾಜ್ಯಕ್ಕೆ ಸಾಗಿಸುವಾಗ ಪೊಲೀಸರ ತಂಡ ದಾಳಿ ನಡೆಸಿ 8 ಜನರನ್ನು ಬಂಧಿಸಿದೆ.
ಅಕ್ರಮವಾಗಿ ಯಾದಗಿರಿಯ ಗುರುಮಿಟ್ಕಲ್ ಕಡೆಯಿಂದ ಗುಜರಾತ್ಗೆ ಅಕ್ಕಿಯನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ಹೈದರಾಬಾದ್-ಮುಂಬೈ ರಾಷ್ಟ್ರೀಯ ಹೆದ್ದಾರಿ 65ರ ಬಸವಕಲ್ಯಾಣದ ಸಸ್ತಾಪೂರ ಬಂಗ್ಲಾ ಬಳಿ ಆಹಾರ ಇಲಾಖೆ ನಿರೀಕ್ಷಕ ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಬಸವಕಲ್ಯಾಣ ನಗರ ಠಾಣೆ ಪಿಎಸ್ಐ ಗುರು ಪಾಟೀಲ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿತು.
ಅನ್ನಭಾಗ್ಯ ಅಕ್ಕಿಯನ್ನ ಸಾಗಿಸುತ್ತಿದ್ದ 4 ಲಾರಿ ಸಹಿತ 36 ಲಕ್ಷ ರೂ. ಮೌಲ್ಯದ 120 ಟನ್ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ. ಒಟ್ಟು 1.16 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ರಾಜಸ್ಥಾನ ಮೂಲದ ಲಾರಿ ಚಾಲಕರಾದ ಬಾಗಿಖಾನ್ ಅಲಿಯಾಸ್ ಬರ್ಕತ್(25), ಅರಬ್ ಖಾನ್(29), ಪೂರ್ತಿ ಬರಕತ್ ಅಲಿ(25), ಶಫಿಖಾನ್(25), ಕ್ಲೀನರ್ ಗಳಾದ ಅಬ್ಬಾಸ್(24), ಜೋಶಿಬಖಾನ್(29), ಖಾಸಿಂ ಖಾನ್(22) ಹಾಗೂ ಪೀರ್ ಖಾನ್(30) ಬಂಧಿತ ಆರೋಪಿಗಳು.
ಲಾರಿಯಲ್ಲಿ ಅಕ್ಕಿ ತುಂಬಿಸಿ ಕಳುಹಿಸಿದ ಗುರುಮಿಟ್ಕಲ್ನ ಮಣಿಕಂಠ ರಾಠೋಡ್ ಮತ್ತು ಉಮ್ಮರ್ಗಾದ ವಿಜಯಕುಮಾರ್ ಪವಾರ್ ಎನ್ನುವರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.