ಹಿರಿಯ ಕಲಾವಿದ ಎಚ್.ಜಿ. ಸೋಮಶೇಖರ ರಾವ್ ನಿಧನ
ಬೆಂಗಳೂರು, ನ.3: ಹಿರಿಯ ರಂಗಭೂಮಿ ಕಲಾವಿದ ಎಚ್.ಜಿ.ಸೋಮಶೇಖರ ರಾವ್(85) ವಯೋಸಹಜ ಖಾಯಿಲೆಯಿಂದಾಗಿ ಇಂದು ನಿಧನರಾಗಿದ್ದಾರೆ.
ರಂಗಭೂಮಿ, ಚಲನಚಿತ್ರ ಹಾಗೂ ಕಿರುತೆರೆ ಕ್ಷೇತ್ರಗಳಲ್ಲಿ ಸಮಾನ ಆಸಕ್ತಿ ಹೊಂದಿದ್ದ ಎಚ್.ಜಿ.ಸೋಮಶೇಖರ್, ಪಾಶ್ಚಿಮಾತ್ಯ ಮತ್ತು ಭಾರತದ ವಿವಿಧ ನಾಟಕ ಕೃತಿಗಳನ್ನು ರಂಗಭೂಮಿಯ ಮೇಲೆ ಜೀವಂತಗೊಳಿಸಿ, ಕನ್ನಡ ರಂಗಭೂಮಿಗೆ ಚೈತನ್ಯ ತುಂಬಿದವರು.
ವೃತ್ತಿಯಲ್ಲಿ ಬ್ಯಾಂಕ್ ಅಧಿಕಾರಿಯಾಗಿದ್ದ ಅವರು, 1972ರಲ್ಲಿ ತೆರೆಕಂಡ ‘ಹೃದಯ ಸಂಗಮ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿ, 1981ರಲ್ಲಿ ಟಿ.ಎಸ್.ರಂಗಾ ನಿರ್ದೇಶನದ ಸಾವಿತ್ರಿ ಚಿತ್ರದ ಜಮೀನ್ದಾರನ ಪಾತ್ರದ ಅಭಿನಯದ ಮೂಲಕ ಮನೆಮಾತಾಗಿದ್ದರು. ಇನ್ನು ಮಿಥಿಲೆಯ ಸೀತೆಯರು, ಹರಕೆಯ ಕುರಿ ಸೇರಿದಂತೆ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಇವರಿಗೆ ಹರಕೆಯ ಕುರಿ ಸಿನೆಮಾದ ಅಭಿನಯಕ್ಕಾಗಿ 1992-93ನೇ ಸಾಲಿನ ರಾಜ್ಯ ಸರಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿತ್ತು. ಇವರ ಅಗಲಿಕೆಗೆ ರಂಗಭೂಮಿ, ಸಿನೆಮಾ ಕ್ಷೇತ್ರದ ಕಲಾವಿದರು ಸಂತಾಪ ವ್ಯಕ್ತಪಡಿಸಿದ್ದಾರೆ.
(ಚಿತ್ರಗಳು: ಪ್ರಗತಿ ಅಶ್ವಥ ನಾರಾಯಣ)