ವಾರ್ಡ್ ಸಮಿತಿಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಅವಕಾಶವಿಲ್ಲ: ಮಂಗಳೂರು ಮಹಾನಗರ ಪೌರ ಸಮಿತಿ
ಮಂಗಳೂರು, ನ.3: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಸಮಿತಿಗಳಲ್ಲಿ ಯಾವುದೇ ಪಕ್ಷದ ಕಾರ್ಯಕರ್ತರಿಗೆ ಅವಕಾಶವಿಲ್ಲ. ಈ ಸಮಿತಿಯಲ್ಲಿ ಕಾರ್ಪೋರೇಟರ್ ಅಧ್ಯಕ್ಷರಾಗಿದ್ದು, 10 ಮಂದಿ ಸದಸ್ಯರಿರುತ್ತಾರೆ. ಅವಿರೋಧ ಆಯ್ಕೆ ಅಥವಾ ಚುನಾವಣೆ ಮೂಲಕ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲು ಅವಕಾಶವಿದೆ. ರಾಜಕೀಯ ಪಕ್ಷಗಳ ಕಾರ್ಯಕರ್ತರು ಸಮಿತಿಯಲ್ಲಿ ಇರುವಂತಿಲ್ಲ ಎಂದು ಮಂಗಳೂರು ಮಹಾನಗರ ಪೌರ ಸಮಿತಿ ತಿಳಿಸಿದೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಚಂದ್ರು ಮನಪಾ ವ್ಯಾಪ್ತಿಯ 60 ವಾರ್ಡ್ಗಳ ಯಾವುದೇ ಸಮಿತಿಯಲ್ಲಿ ಪಕ್ಷದ ಕಾರ್ಯಕರ್ತರು ಇರುವಂತಿಲ್ಲ. ಒಂದು ವೇಳೆ ಯಾರಾದರೂ ಪಕ್ಷದ ಕಾರ್ಯಕರ್ತರಿದ್ದರೆ ಅಂತಹವರ ಸದಸ್ಯತ್ವವನ್ನು ಅನರ್ಹಗೊಳಿಸಲು ಹೋರಾಟ ಮಾಡಲಾಗುವುದು ಎಂದರು.
ವಾರ್ಡ್ ಸಮಿತಿ ರಚಿಸಲು ಸರಕಾರ ಆದೇಶಿಸಿ 23 ವರ್ಷಗಳಾಗಿವೆ. ತಡವಾಗಿಯಾದರೂ ಮಂಗಳೂರು ಮನಪಾ ವ್ಯಾಪ್ತಿಯಲ್ಲಿ ವಾರ್ಡ್ ಸಮಿತಿ ರಚನೆಯಾಗುತ್ತಿರುವುದು ಸ್ವಾಗತಾರ್ಹ. ವಾರ್ಡ್ ಕಮಿಟಿಗಳನ್ನು ರಚಿಸುವ ಮೂಲಕ ಭ್ರಷ್ಟಾಚಾರ, ಅವ್ಯವಹಾರ ಮತ್ತು ಕಳಪೆ ಕಾಮಗಾರಿ ತಡೆಯಲು ಸಾಧ್ಯವಾಗಲಿದೆ. ಪಾಲಿಕೆಯ ಎಲ್ಲ 60 ವಾರ್ಡ್ಗಲ್ಲಿ ವಾರ್ಡ್ ಸಮಿತಿ ರಚನೆಯಾಗುವ ಮೂಲಕ ಸುಂದರ ಮಹಾನಗರ ನಿರ್ಮಾಣಕ್ಕೆ ಜನರ ಬೆಂಬಲ ನೀಡಬೇಕು ಎಂದು ಸಮಿತಿಯ ಮುಖಂಡ ಎಂ.ಜಿ.ಹೆಗಡೆ ಹೇಳಿದರು.
ಸಮಿತಿ ರಚನೆಗೆ ಸಂಬಂಧಿಸಿ ಹಲವು ವರ್ಷಗಳ ಕಾನೂನು ಹೋರಾಟಕ್ಕೆ ಈಗ ಜಯ ಲಭಿಸಿದೆ. ಉತ್ತಮ ವ್ಯಕ್ತಿಗಳನ್ನ ಆಯ್ಕೆ ಮಾಡಿ ವಾರ್ಡ್ನ ಸರ್ವತೋಮುಖ ಅಭಿವೃದ್ಧಿ ಮಾಡಲು ಸಾಧ್ಯವಿದೆ. ಸಮಿತಿಯ ಅನುಮತಿ ಇಲ್ಲದೆ ವಾರ್ಡ್ನಲ್ಲಿ ಯಾವುದೇ ಕೆಲಸಗಳು ಆಗುವುದಿಲ್ಲ. ಕೆಲಸ ಕಾರ್ಯ ಆಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ರಾಜಕಾರಣಿ-ಅಧಿಕಾರಿಗಳನ್ನು ಕಾಲೆಳೆಯುವವರು ಸಮಿತಿಯನ್ನು ಬಳಸಿಕೊಳ್ಳಬೇಕು. ಆ ಮೂಲಕ ದೇಶಕ್ಕೆ ಮಾದರಿಯಾಗುವ ವಾರ್ಡ್ ಕಮಿಟಿ ನಿರ್ಮಿಸಲು ಸಾಧ್ಯವಿದೆ ಎಂದು ಎಂ.ಜಿ.ಹೆಗಡೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಎಸ್.ಪಿ.ಚಂಗಪ್ಪ, ಪದಾಧಿಕಾರಿಗಳಾದ ಪದ್ಮನಾಭ ಉಳ್ಳಾಲ್, ಸ್ಟ್ಯಾನಿ ಅಲ್ವಾರಿಸ್, ಮೋಹನ್ ಪಚ್ಚನಾಡಿ, ಶಿವಪ್ಪ ಉಪಸ್ಥಿತರಿದ್ದರು.