ಭೀಮ ಆರ್ಮಿ ಏಕತಾ ಮಿಷನ್ ಸಂಘಟನೆ ಹೆಸರು ದುರುಪಯೋಗ ಆರೋಪ: ಯಶಪಾಲ ಬೋರೆ ವಿರುದ್ಧ ದೂರು
ಬೆಂಗಳೂರು, ನ.7: ಭೀಮ ಆರ್ಮಿ ಭಾರತ ಏಕತಾ ಮಿಷನ್ ಸಂಘಟನೆಯ ಹೆಸರನ್ನು ಅನಧಿಕೃತವಾಗಿ ಬಳಸಿಕೊಂಡು ಸಂಘದ ಸ್ವಯಂ ಘೋಷಿತ ಅಧ್ಯಕ್ಷನಾಗಿ ಚಟುವಟಿಕೆಗಳನ್ನು ನಡೆಸುತ್ತಿದ್ದರೆಂದು ಆರೋಪಿಸಿ ಯಶಪಾಲ ಬೋರೆ ಅವರ ವಿರುದ್ಧ ಸಂಘಟನೆ ರಾಜ್ಯಾಧ್ಯಕ್ಷ ಎಸ್.ಎಸ್. ತಾವಡೆ ನಗರದ ಗಾಂಧಿನಗರ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಯಶಪಾಲ ಬೋರೆ ಎಂಬುವ ವ್ಯಕ್ತಿ ಸ್ವಯಂ ಘೋಷಿತವಾಗಿ ಭೀಮ ಆರ್ಮಿ ರಾಜ್ಯಾಧ್ಯಕ್ಷನೆಂದು ಹೇಳಿಕೊಂಡು ಸಂಘದ ಹೆಸರು ಹಾಗೂ ಲಾಂಛನವನ್ನು ದುರುಪಯೋಗ ಪಡಿಸಿಕೊಂಡು ಸಂಘದ ಘಟಕಗಳಿಗೆ ಅಧ್ಯಕ್ಷರನ್ನು ನೇಮಕಮಾಡಿ ನವೆಂಬರ್ 8 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪದಾಧಿಕಾರಿಗಳ ಪದಗ್ರಹಣ ರಾಜ್ಯಮಟ್ಟದ ಬೃಹತ್ ಸಮಾವೇಶವನ್ನು ಆಯೋಜಿಸಿದ್ದರು.
ಈ ಕಾರ್ಯಕ್ರಮ ಅನಧಿಕೃತವಾಗಿದ್ದು ಸಂಘಟನೆಗೆ ಸಂಬಂಧಿಸಿಲ್ಲದ ವ್ಯಕ್ತಿಗಳು ಭೀಮ ಆರ್ಮಿಯ ಹೆಸರಿನಲ್ಲಿ ಸಮಾವೇಶ ನಡೆಸುತ್ತಿದ್ದಾರೆ. ಇದನ್ನು ಕೂಡಲೆ ರದ್ದುಪಡಿಸಬೇಕೆಂದು ಸಂಘಟನೆ ರಾಜ್ಯಾಧ್ಯಕ್ಷ ಎಸ್.ಎಸ್. ತಾವಡೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಇದರ ಅನ್ವಯ ಉಪಾರಪೇಟೆ ಪೊಲೀಸರು ಫ್ರೀಡಂ ಪಾರ್ಕ್ ಸಮಾವೇಶವನ್ನು ರದ್ದುಪಡಿಸಿದ್ದಾರೆ.
ಸಂಸ್ಥಾಪಕ ಅಧ್ಯಕ್ಷರಾದ ವಿಜಯಕುಮಾರ್ ಅಜಾದ್ ಕಳೆದ ಜನವರಿಯಲ್ಲಿ ಕಲಬುರಗಿಯಲ್ಲಿ ನಡೆದ ರಾಜ್ಯ ಮಟ್ಟದ ಕಾರ್ಯಕಾರಿಣಿ ಸಭೆಯಲ್ಲಿ ಎಲ್ಲಾ ಪದಾಧಿಕಾರಿಗಳನ್ನು ನೇಮಕ ಮಾಡಿ ಹಿಂದೆ ಇದ್ದ ರಾಜ್ಯ ಸಮಿತಿಯನ್ನು ವಿಸರ್ಜನೆಮಾಡಿ ಎಸ್.ಎಸ್. ತಾವಡೆ ಅವರನ್ನು ಕರ್ನಾಟಕ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಅಧಿಕೃತ ಆದೇಶ ಪತ್ರವನ್ನು ನೀಡಿದ್ದರು.
ಭೀಮ ಆರ್ಮಿ ಸಂಘಟನೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಬೃಹತ್ ಪ್ರಮಾಣದಲ್ಲಿ ಬೆಳೆದು ನಿಂತಿದೆ. ಉತ್ತಮ ಹೆಸರನ್ನು ಪಡೆದಿರುವ ಸಂಘಟನೆ ಅನೇಕ ಸಮಾಜಮುಖಿ ಕಾರ್ಯಕ್ರಮ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಇದರ ಹೆಸರನ್ನು ಮತ್ತು ಲಾಂಛನವನ್ನು ಯಾರಾದರು ದುರಪಯೋಗ ಪಡಿಸಿಕೊಂಡರೆ ಅಂಥವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯಾಧ್ಯಕ್ಷ ಎಸ್.ಎಸ್. ತಾವಡೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಸ್ ಆರ್ ಹುಗ್ಗೆ, ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷ ಪಾಳಾ, ಚಿತ್ತಾಪುರ ತಾಲ್ಲೂಕು ಅಧ್ಯಕ್ಷ ನಾಗರಾಜ ಗಾಯಕವಾಡ ಮತ್ತಿತರರು ಸೇರಿ ದೂರು ನೀಡಿದರು.