ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ : ಪುಷ್ಪಾ ಅಮರ್ ನಾಥ್
ಮೈಸೂರು : ರಾಜ್ಯದ ಜನರು ಕೊರೋನ ಪ್ರವಾಹ ಭೀತಿಯಿಂದ ತತ್ತರಿಸುತ್ತಿದ್ದರೆ ರಾಜ್ಯ ಸರ್ಕಾರ ಮಾತ್ರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಇದನ್ನು ಖಂಡಿಸಿ ರಾಜ್ಯ ಮಹಿಳಾ ಕಾಂಗ್ರೆಸ್ ವತಿಯಿಂದ ಬಿಜೆಪಿ ನಾಯಕರುಗಳಿಗೆ ಈರುಳ್ಳಿ, ಟೊಮೋಟೊ, ಸೇರಿದಂತೆ ತರಕಾರಿಗಳನ್ನು ಪಾರ್ಸೆಲ್ ಕಳುಹಿಸುವ ಮೂಲಕ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಪುಷ್ಪಾ ಅಮರ್ ನಾಥ್ ತಿಳಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಢಸಿಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರು, ಶಾಸಕರು ಮನೆಗೆ ದೀಪಾವಳಿ ಹಬ್ಬದ ಉಡುಗೊರೆಯಾಗಿ ಬೆಲೆ ಏರಿಕೆ ತರಕಾರಿಗಳನ್ನು ನೀಡುವುದಾಗಿ ಹೇಳಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮಧ್ಯಮ ಮತ್ತು ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಇದನ್ನು ಬಿಜೆಪಿ ನಾಯಕರಿಗೆ ಸರ್ಕಾರಕ್ಕೆ ತಿಳಿಸುವ ನಿಟ್ಟಿನಲ್ಲಿ ಮಹಿಳಾ ಕಾಂಗ್ರೆಸ್ ಸಚಿವರು-ಶಾಸಕರ ಮನೆಗೆ ಈರುಳ್ಳಿ, ಆಲೂಗಡ್ಡೆ, ಟೋಮೋಟಾ ಮುಂತಾದ ಬೆಲೆ ಏರಿಕೆಯ ದಿನ ನಿತ್ಯದ ವಸ್ತುಗಳನ್ನು ಗಿಫ್ಟ್ ಆಗಿ ನೀಡುವ ಮೂಲಕ ವಿಶೇಷ ಪ್ರತಿಭಟನೆ ನಡೆಸಲು ಚಿಂತಿಸಿದೆ ಎಂದು ಮಾಹಿತಿ ನೀಡಿದರು.
ಭಾರತ್ ಮಾತಾಕಿ ಜೈ ಎನ್ನುವ ಶೋಭ ಕರಂದ್ಲಾಜೆ ಮಹಿಳಾ ದೌರ್ಜನ್ಯದ ಬಗ್ಗೆ ಮೌನ ಆಗಿರುವುದೇಕೆ ಎಂದು ಪ್ರಶ್ನಿಸಿದ ಅವರು,
ಶಾಸಕ ಸಿದ್ದು ಸವದಿ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ಸಂಸದೆ ಶೋಭಾ ಕರಂದ್ಲಾಜೆ ಬೇಡದ ವಿಚಾರ ಕ್ಕೆ ಮೂಗು ತೋರಿಸುತ್ತಾರೆ. ಮಹಿಳೆಯಾಗಿ ಈ ವಿಚಾರದಲ್ಲಿ ಯಾಕೆ ಮೌನವಾಗಿದ್ದಾರೆ. ನಿಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ. ಭಾರತ ಮಾತಾಕೀ ಜೈ ಎಂದರೆ ಸಾಕಲ್ಲ ಮಹಿಳೆ ದೌರ್ಜನ್ಯದ ಬಗ್ಗೆ ಮಾತನಾಡಿ ಎಂದು ಚೇಡಿಸಿದರು.
ಬಿಜೆಪಿ ರಾಜ್ಯಗಳಲ್ಲಿ ಮಹಿಳೆ ಮೇಲಿನ ದೌರ್ಜನ್ಯಗಳು ನಡೆಯುತ್ತಿವೆ. ಮಹಾತ್ಮ ಗಾಂಧೀಜಿ ಅವರು ಮಧ್ಯರಾತ್ರಿಯಲ್ಲಿ ಮಹಿಳೆ ಓಡಾಟ ನಡೆಸಿ ದರೆ ರಾಮರಾಜ್ಯ ಆಗುತ್ತದೆ ಎಂದು ಹೇಳಿದ್ದರು. ಆದರೆ ಬಿಜೆಪಿ ಸರ್ಕಾರದಲ್ಲಿ ಬೆಳಿಗ್ಗಿನ ಸಮಯದಲ್ಲಿಯೇ ಓಡಾಟ ನಡೆಸುವುದು ಕಷ್ಟವಾಗಿದೆ. ಈ ಬಗ್ಗೆ ಬಿಜೆಪಿ ನಾಯಕರು ಕೂಡ ಧ್ವನಿ ಎತ್ತುವುದಿಲ್ಲ ಎಂದು ಹೇಳಿದೆರು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಲತಾ ಸಿದ್ದಶೆಟ್ಟಿ, ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ಪುಷ್ಪವಲ್ಲಿ, ಹಾಜರಿದ್ದರು.