ಬಂಡೀಪುರ ಸಮೀಪದ ಮಧುಮಲೆ ಅರಣ್ಯದಲ್ಲಿ ಹೆಣ್ಣು ಹುಲಿ ಸಾವು: 2 ಹುಲಿ ಮರಿಗಳ ರಕ್ಷಣೆ
ಗುಂಡ್ಲುಪೇಟೆ, ನ.21: ಬಂಡೀಪುರಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಮಧುಮಲೆ ಅರಣ್ಯ ಪ್ರದೇಶದಲ್ಲಿ ಹೆಣ್ಣು ಹುಲಿ ಸಾವನ್ನಪ್ಪಿದ್ದು, ಮತ್ತೆರಡು ಹುಲಿ ಮರಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ತಮಿಳುನಾಡಿನ ಮಧುಮಲೆ ಹುಲಿ ಸಂರಕ್ಷಿತ ಮಸಿಣಗುಡಿ ಗದ ಸಿಂಗರಾ ಪ್ರದೇಶದಲ್ಲಿ ಹುಲಿಯೊಂದು ಸಾವನ್ನಪ್ಪಿದೆ. ಈ ಪ್ರದೇಶದ ಶುಕ್ರವಾರ ಬೆಳಗ್ಗೆ ಎರಡು ಗಂಡು ಮರಿಗಳು ಪತ್ತೆಯಾಗಿವೆ.
ಹುಲಿ ಸಾವಿನ ತನಿಖೆ ನಡೆಸುತ್ತಿರುವಾಗ ತಮಿಳುನಾಡು ಅರಣ್ಯ ಇಲಾಖೆ ಸಿಬ್ಬಂದಿ ಬೆಳಗ್ಗೆ ಈ ಮರಿಗಳನ್ನು ರಕ್ಷಿಸಿದ್ದಾರೆ. ಎರಡು ತಿಂಗಳ ಹಿಂದೆ ಐದು ಕೆನ್ನಾಯಿಗಳು ಇದೇ ಸ್ಥಳದಲ್ಲಿ ವಿಷ ಪಾಶಾಣದಿಂದ ಸಾವನ್ನಪ್ಪಿದ್ದವು. ಅದೇ ರೀತಿ ಹುಲಿಯ ಸಾವಿಗೂ ಕೂಡ ವಿಷ ಪಾಶಾಣ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ಜುಲೈನಲ್ಲಿ ಮಸಿಣಗುಡಿಯಲ್ಲಿ ಹುಲಿಯೊಂದು ಅಲ್ಲಿನ ಬುಡಕಟ್ಟು ಮಹಿಳೆಯನ್ನು ಕೊಂದಾಗಿನಿಂದಲೂ ಈ ರೀತಿಯ ಘಟನೆಗಳು ನಡೆಯುತ್ತಿವೆ ಎನ್ನಲಾಗಿದೆ. ಈ ಕುರಿತು ರಾಷ್ಟ್ರೀಯ ಸಂರಕ್ಷಣಾ ಪ್ರಾಧಿಕಾರ ಎನ್ಟಿಸಿಎ ಕೂಡ ತಮಿಳುನಾಡಿನ ಅರಣ್ಯ ಇಲಾಖೆಯ ಅಧಿಕಾರಿಗಳು ಎಚ್ಚರಿಸಿದ್ದರು.
ಹುಲಿ ಸಾವಿಗೆ ನಿಖರವಾದ ಕಾರಣ ತಿಳಿಯಲು ವಿಧಿ ವಿಜ್ಞಾನ ವರದಿಗೆ ಕಾಯುತ್ತಿದ್ದಾರೆ. ಮರಿಗಳ ವಿಚಾರದಲ್ಲಿ ನಾವು ಮುಂದೆ ಏನು ಮಾಡಬೇಕಂಬುದರ ಬಗ್ಗೆ ಎನ್ಟಿಸಿಎ ನಿರ್ದೇಶನಕ್ಕಾಗಿ ಕಾಯುತ್ತಿದ್ದೇವೆ ಎಂದು ಮಧುಮಲೆ ಹುಲಿ ಸಂರಕ್ಷಿತ ಪ್ರದೇಶ ಉಪನಿರ್ದೇಶಕ ಶ್ರೀಕಾಂತ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.