ಅಂತರ್ಜಾತಿ ವಿವಾಹಕ್ಕೆ ವಿರೋಧ: ಅತ್ತೆ ಮನೆ ಮುಂಭಾಗ ಧರಣಿ ಕುಳಿತ ಸೊಸೆ
ಸಕಲೇಶಪುರ, ನ.22: ಅಂತರ್ಜಾತಿ ವಿವಾಹಕ್ಕೆ ವಿರೋಧಿಸಿದ ಅತ್ತೆ ಮನೆ ಮುಂದೆ ಸೊಸೆ ಧರಣಿ ಕುಳಿತಿರುವ ಪ್ರಕರಣ ತಾಲೂಕಿನ ಜಮ್ಮನ ಹಳ್ಳಿ ಬಳಿ ನಡೆದಿದೆ.
ದಲಿತ ಸಮುದಾಯಕ್ಕೆ ಸೇರಿದ ಕಲಾ(28) ತಾಲೂಕಿನ ಬಾಳ್ಳು ಪೇಟೆ ಅಂಬೇಡ್ಕರ್ ನಗರದ ನಿವಾಸಿಯಾಗಿದ್ದು. ಜಮ್ಮನ ಹಳ್ಳಿ ಗ್ರಾಮದ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಲೋಹಿತ್( 36) ನೊಂದಿಗೆ ಕಳೆದ 3 ವರ್ಷಗಳ ಹಿಂದೆ ಪ್ರೇಮ ವಿವಾಹ ವಾಗಿತ್ತು. ಇವರಿಬ್ಬರ ವಿವಾಹಕ್ಕೆ ಸಂಬಂದಿಸಿದಂತೆ ಲೋಹಿತ್ ತಾಯಿ ಪ್ರೇಮ ಹಾಗೂ ತಂದೆ ನೀಲಕಂಠ ರವರು ವಿರೋಧ ವ್ಯಕ್ತಪಡಿಸಿದರು ಎಂದು ಹೇಳಲಾಗುತ್ತಿದೆ.
ಲೋಹಿತ್ ನೊಂದಿಗೆ ಕಲಾ ಅವರದ್ದು ಎರಡನೆ ಮದುವೆಯಾಗಿದ್ದು, ಮೊದಲನೆ ಪತ್ನಿ ಶ್ವೇತರವರಿಗೆ ಕಳೆದ 5 ವರ್ಷಗಳ ಹಿಂದೆ ನ್ಯಾಯಾಲಯದಲ್ಲಿ ವಿಚ್ಛೇದನೆಯಾಗಿತ್ತು. ವಿಚ್ಛೇದನೆಗೆ ಸಂಬಂದಿಸಿದಂತೆ ಲೋಹಿತ್ ಪೋಷಕರ ಕೆಂಗಣ್ಣಿಗೆ ಗುರಿಯಾಗಿದ್ದ ಪರಿಣಾಮ 5 ವರ್ಷಗಳಿಂದ ಮನೆಯಿಂದ ಹೊರಗಿದ್ದ.
ಕಲಾ ಜೊತೆಯಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಮದುವೆಯಾಗಿ ಮನೆಯ ಹೊರಗಿದ್ದು ಬೇಸತ್ತಿರುವ ಲೋಹಿತ್ ಪತ್ನಿಯನ್ನು ಮನೆಗೆ ಕರೆತಂದು ಪೋಷಕರೊಂದಿಗೆ ಜೀವನ ನಡೆಸಲು ಮುಂದಾಗಿದ್ದ. ಆದರೆ ಪೋಷಕರು ಮನೆಗೆ ಸೇರಿಸಿಕೊಳ್ಳಲಿಲ್ಲ ಎನ್ನಲಾಗಿದ್ದು, ಈ ಸಂಬಂಧ ಕೆಲವು ದಿನಗಳ ಹಿಂದೆ ಗ್ರಾಮಾಂತರ ಪೊಲೀಸ್ ಠಾಣೆಗೆ ಲೋಹಿತ್ ದೂರು ನೀಡಿದ್ದಾನೆ.
ಲೊಹಿತ್ ಗೆ ಕುಟುಂಬಕ್ಕೆ ಸುಮಾರು 21 ಎಕರೆ ಪಿತ್ರಾರ್ಜಿತ ಕಾಫಿ ತೋಟವಿದ್ದು, ಇದರಲ್ಲಿ ಪಾಲು ನೀಡುವಂತೆ ತಂದೆ ನೀಲ ಕಂಠರವರಿಗೆ ಒತ್ತಾಯ ಪೂರ್ವಕ ಮನವಿ ಮಾಡಿದ್ದ. ಆದರೆ ತಂದೆ ಆಸ್ತಿಯನ್ನು ನ್ಯಾಯಾಲಯದ ಮೂಲಕ ಪಡೆಯುವಂತೆ ತಿಳಿಸಿ, ಯಾವುದೇ ಕಾರಣಕ್ಕೂ ಮನೆಗೆ ಬಾರಬಾರದು ಎಂದು ತಾಕೀತು ಮಾಡಿದ್ದಾರೆಂದು ತಿಳಿದು ಬಂದಿದೆ.