ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ: ಅಧ್ಯಕ್ಷ ಸ್ಥಾನ ನಿರಾಕರಿಸಿದ ವೀರಣ್ಣ ಚರಂತಿಮಠ ?
ಬಾಗಲಕೋಟೆ, ನ.23: ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಡಾ.ವೀರಣ್ಣ ಚರಂತಿಮಠ ಅವರು ನಿರಾಕರಿಸಿದ್ದಲ್ಲದೇ, ಮತ್ತೊಬ್ಬರ ಹೆಸರನ್ನು ಶಿಫಾರಸು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ವೀರಶೈವ-ಲಿಂಗಾಯನ ಸ್ವಾಮೀಜಿಗಳು, ಪ್ರಮುಖ ಮುಖಂಡರೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಹಾಗೂ ಬವಿವ ಸಂಘದ ಕಾರ್ಯಾಧ್ಯಕ್ಷರಾದ ಶಾಸಕ ಡಾ.ವೀರಣ್ಣ ಚರಂತಿಮಠ ಸಮಾಜದಲ್ಲಿನ ಪ್ರಭಾವಿ ನಾಯಕರು ಎನಿಸಿಕೊಂಡಿದ್ದಾರೆ. ಅಲ್ಲದೆ, ವೀರಶೈವ- ಲಿಂಗಾಯತ ತತ್ವ, ಸಿದ್ಧಾಂತ, ಇತಿಹಾಸವನ್ನು ಬಲ್ಲವರಾಗಿದ್ದಾರೆ.
ವೀರಶೈವ ಮಹಾಸಭಾದಲ್ಲೂ ತಮ್ಮದೇ ಆದ ಪ್ರಭಾವ ಹೊಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚರಂತಿಮಠಗೆ ದೂರವಾಣಿ ಮೂಲಕ ಪ್ರಾಧಿಕಾರದ ಸಾರಥ್ಯ ವಹಿಸುವಂತೆ ಸೂಚಿಸಿದ್ದರು ಎಂದು ತಿಳಿದು ಬಂದಿದೆ.
ಆದರೆ, ಚರಂತಿಮಠ ಅವರು ನಿರಾಕರಿಸಿದ್ದು, ಬೆಂಗಳೂರಿನ ಬಿ.ಎಸ್.ಪರಮಶಿವಯ್ಯಗೆ ಬಿಟ್ಟುಕೊಡಲು ನಿರ್ಧರಿಸಿದಲ್ಲದೇ ಅವರದೇ ಹೆಸರನ್ನು ಸಿಎಂಗೆ ತಿಳಿಸಿದ್ದಾರೆ. ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ ಕಾರ್ಯಾಧ್ಯಕ್ಷರಾಗಿರುವ ಪರಮಶಿವಯ್ಯ ಬೆಂಗಳೂರಿನಲ್ಲಿ ಸಮುದಾಯ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದಿದ್ದಾರೆ ಎನ್ನಲಾಗಿದೆ.
ಅವರೇ ಪ್ರಾಧಿಕಾರಕ್ಕೆ ಸೂಕ್ತ. ಸಮಾಜ ಸಂಘಟನೆಯಲ್ಲೂ ಅವರನ್ನು ಇನ್ನಷ್ಟು ಬಳಸಿಕೊಳ್ಳಬಹುದು ಎಂದು ಸಿಎಂ ಬಳಿ ಹೇಳಿದ್ದಾರೆ ಎನ್ನಲಾಗಿದೆ. ಆದರೆ, ಹೊಸ ಪ್ರಾಧಿಕಾರಕ್ಕೆ ಯಾರು ಅಧ್ಯಕ್ಷರಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.