ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ರಚೆನೆಗೆ ಎಂ.ಬಿ.ಪಾಟೀಲ್ ವಿರೋಧ
ವಿಜಯಪುರ, ನ.23: ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಯಿಂದ ಯಾವುದೇ ಸಮಾಜ ಮುಂದೆ ಬರಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೊಡ್ಡ ಸಮಾಜಗಳಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಿದರೆ ಯಾವುದೇ ಪ್ರಯೋಜನವಿಲ್ಲ. ಈ ಹಿಂದೆ ಲಿಂಗಾಯತ ಧರ್ಮ ಪ್ರತ್ಯೇಕಕ್ಕೆ ನಾನು ಹೋರಾಟ ಮಾಡಿದಾಗ ಬಿಜೆಪಿಯವರು ಎಂ.ಬಿ.ಪಾಟೀಲ್ ಧರ್ಮ ಒಡೆಯುತ್ತಿದ್ದಾರೆ ಎಂದು ಕೂಗಿದರು. ಆದರೆ ಧರ್ಮ ಒಡೆಯಲು ಹೋದವರು ಯಾರು ಎಂದು ಮುಂದಿನ ದಿನಗಳಲ್ಲಿ ಪ್ರತ್ಯುತ್ತರ ನೀಡುತ್ತೇನೆ ಎಂದು ಹೇಳಿದರು.
ನಮ್ಮ ಲಿಂಗಾಯತ ಮಕ್ಕಳ ಭವಿಷ್ಯ ಹಾಳು ಮಾಡಿದ್ದಾರೆ. ನಿಜವಾಗಿ ಲಿಂಗಾಯತರಿಗೆ ಒಳ್ಳೆಯದು ಮಾಡುವುದಾದರೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ನೀಡಲಿ. ಕೇವಲ ನಿಗಮ ಸ್ಥಾಪಿಸಿದರೆ ಏನೂ ಪ್ರಯೋಜನವಿಲ್ಲ. ರಾಜ್ಯದಲ್ಲಿ ಲಿಂಗಾಯತ ಧರ್ಮದ 1.18 ಕೋಟಿ ಜನ ಇದ್ದಾರೆ. ನಿಗಮ ಸ್ಥಾಪಿಸಿ 1 ಸಾವಿರ ಕೋಟಿ ರೂ. ಕೊಟ್ಟರೆ ಸಾಲುವುದಿಲ್ಲ. ಲಿಂಗಾಯತರಿಗೆ ಒಳ್ಳೆಯದನ್ನು ಮಾಡುವುದಾದರೆ 5 ಸಾವಿರ ಕೋಟಿ ರೂ. ಮೀಸಲಿಡಲಿ ಎಂದರು.