ಸರಕಾರ ರಚನೆಯಲ್ಲಿ ನಿಮ್ಮ ತ್ಯಾಗ, ನಮ್ಮ ಕೊಡುಗೆಯೂ ಇದೆ: ರೇಣುಕಾಚಾರ್ಯ
ಬೆಂಗಳೂರು, ನ. 26: ಬಿಜೆಪಿಯ 105 ಮತ್ತು ಜೆಡಿಎಸ್-ಕಾಂಗ್ರೆಸ್ನಿಂದ ಬಂದ 17 ಶಾಸಕರಿಂದ ಈ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಿದೆ ಎಂದು ನಾನು ತಿಳಿಸಿದ್ದೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಸ್ಪಷ್ಟನೆ ನೀಡಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 17 ಮಂದಿ ಬಂದಿದ್ದರಿಂದಲೇ ಅಧಿಕಾರಕ್ಕೆ ಬಂದಿದ್ದು, ನಿಮ್ಮ ತ್ಯಾಗವೂ ಇದೆ, ನಮ್ಮ ಕೊಡುಗೆಯೂ ಇದೆ. ಒಬ್ಬ ವ್ಯಕ್ತಿಯಿಂದ ಅಧಿಕಾರಕ್ಕೆ ಬಂದಿಲ್ಲ ಎಂದು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷದ ವರಿಷ್ಟರು ನಿರ್ಧಾರ ಮಾಡಲಿದ್ದಾರೆ. ನಾನೊಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತ ಎಂದು ಸ್ಪಷ್ಟನೆ ನೀಡಿದ ಅವರು, ಸಚಿವ ಸ್ಥಾನಕ್ಕಾಗಿ ನಾನು ಯಾವುದೇ ಕಾರಣಕ್ಕೂ ಬ್ಲಾಕ್ಮೇಲ್ ಮಾಡುವ ವ್ಯಕ್ತಿಯಲ್ಲ. ನೇರವಾಗಿಯೇ ಪ್ರಶ್ನೆ ಮಾಡುವವ ಎಂದರು.
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಚೇರಿ ಉದ್ಘಾಟನೆಗೆ ಆಹ್ವಾನವಿಲ್ಲವೆ ? ಎಂಬ ಪ್ರಶ್ನೆಗೆ ಉತ್ತರಿಸಿದ ರೇಣುಕಾಚಾರ್ಯ, ಸಿ.ಟಿ.ರವಿ ನನ್ನ ಅತ್ಮೀಯ ಸ್ನೇಹಿತರು. ನ.27ರಂದು ನನಗೂ ಆಹ್ವಾನ ನೀಡಿದ್ದು, ನಾನು ಹೊಸದಿಲ್ಲಿಗೆ ಹೊರಟಿದ್ದೆ. ಆದರೆ, ನನ್ನ ಹುಟ್ಟೂರಿನಲ್ಲಿ ದೇವಸ್ಥಾನವೊಂದರ ಉದ್ಘಾಟನೆ ಕಾರ್ಯಕ್ರಮ ನಿಮಿತ್ತ ದಿಲ್ಲಿಗೆ ತೆರಳಲು ಸಾಧ್ಯವಾಗಿಲ್ಲ ಎಂದರು.