ಖಾಸಗಿ ಶಾಲೆಗಳ ಧಿಮಾಕಿನ ಹಿಂದೆ ಸರಕಾರದ ವೈಫಲ್ಯವಿದೆ: ದಿನೇಶ್ ಗುಂಡೂರಾವ್
ಬೆಂಗಳೂರು, ನ.26: ಶುಲ್ಕ ನೀಡದಿದ್ದಲ್ಲಿ ಆನ್ಲೈನ್ ಶಿಕ್ಷಣ ಮಾಡುವುದಿಲ್ಲ ಎಂಬ ಖಾಸಗಿ ಶಾಲೆಗಳ ಧಿಮಾಕಿನ ಮಾತುಗಳ ಹಿಂದೆ ರಾಜ್ಯ ಸರಕಾರದ ಆಡಳಿತ ವೈಫಲ್ಯವಿದೆ ಎಂದು ಕಾಂಗ್ರೆಸ್ನ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿ, ಸರಕಾರ ಹಾಗೂ ಶಿಕ್ಷಣ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿರುವ ಅವರು, ಸಚಿವರೆ, ನಮ್ಮದು ಗುರುಕುಲ ಪರಂಪರೆ. ಶಿಕ್ಷಣ ವ್ಯವಹಾರವಲ್ಲ ಅದು ಸೇವೆ. ಖಾಸಗಿ ಸಂಸ್ಥೆಗಳು ಶುಲ್ಕ ಕಟ್ಟದೆ ಇದ್ದರೆ ಆನ್ಲೈನ್ ತರಗತಿ ನಡೆಸುವುದಿಲ್ಲ ಎಂಬ ಧಿಮಾಕಿನ ಮಾತನಾಡುತ್ತಿವೆ ಎಂದರೆ, ನಿಮ್ಮ ಆಡಳಿತ ವೈಫಲ್ಯ ತೋರಿಸುತ್ತಿದೆ. ಕೋವಿಡ್ನ ಸಂಕಷ್ಟ ಕಾಲದಲ್ಲಿ ಶುಲ್ಕ ಮುಖ್ಯವೋ, ಶಿಕ್ಷಣ ಮುಖ್ಯವೋ ನಿರ್ಧರಿಸಿ ಎಂದು ತಿಳಿಸಿದ್ದಾರೆ.
ಮರಡೋನಾ ನಿಧನಕ್ಕೆ ಸಂತಾಪ: ಹೃದಯಾಘಾತದಿಂದ ಮೃತಪಟ್ಟಿರುವ ಫುಟ್ಬಾಲ್ ಲೋಕದ ಮಾಂತ್ರಿಕ ಡಿಯಾಗೋ ಮರಡೋನಾ ಬದುಕಿನ ಆಟ ಮುಗಿಸಿದ್ದಾರೆ. ಅರ್ಜೆಂಟಿನಾದ ಮರಡೋನಾ ಅದ್ಭುತ ಕೌಶಲ್ಯದ ಫುಟ್ಬಾಲ್ ಆಟಗಾರ. ಅವರ ರೋಮಾಂಚಕ ಆಟ ಇನ್ನು ನೆನಪು ಮಾತ್ರ. ಫುಟ್ಬಾಲ್ ದಂತಕತೆ ಮರಡೋನಾ ಅಭಿಮಾನಿಗಳ ಹೃದಯದಲ್ಲಿ ಎಂದೆಂದಿಗೂ ಅಮರರಾಗಿ ಉಳಿಯಲಿದ್ದಾರೆ. ಮರಡೋನಾರಿಗೆ ಭಾವಪೂರ್ಣ ವಿದಾಯ ಎಂದು ತಮ್ಮ ಸಂತಾಪ ಟ್ವೀಟ್ ನಲ್ಲಿ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.