ಮಾಜಿ ಸಚಿವ ರೋಷನ್ ಬೇಗ್ ಗೆ ಯಾವುದೇ ನಷ್ಟವಾಗಿಲ್ಲ: ಶಾಸಕ ತನ್ವೀರ್ ಸೇಠ್
ಮೈಸೂರು,ನ.28: ಮಾಜಿ ಸಚಿವ ರೋಷನ್ ಬೇಗ್ ಅವರಿಗೆ ನಷ್ಟ ಎಲ್ಲೂ ಆಗಿಲ್ಲ. ಅವರಿಗೆ ಕಾಂಗ್ರೆಸ್ ನಿಂದ ಲಾಭವೇ ಆಗಿದೆ. ಅವರು ರಾಜಕೀಯ ಕಾರಣಕ್ಕೆ ತನಿಖೆಗೊಳಪಟ್ಟಿಲ್ಲ. ಐಎಂಎ ಪ್ರಕರಣದಿಂದ ತನಿಖೆಗೊಳಗಾಗಿದ್ದಾರೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹರಿಯುವ ನೀರು ಹಳ್ಳ ದಿಣ್ಣೆಯಲ್ಲಿ ನುಗ್ಗುತ್ತೆ. ಹಾಗೆಯೇ ರೋಷನ್ ಬೇಗ್ ಅವರಿಗೆ ರಾಜಕೀಯದಿಂದ ಯಾವುದೇ ನಷ್ಟವಾಗಿಲ್ಲ. ಐಎಂಎ ಪ್ರಕರಣದ ಆರೋಪವಿದ್ದು, ತನಿಖೆಯಿಂದ ಸತ್ಯ ಹೊರ ಬರಲಿದೆ ಎಂದರು.
ವೀರಶೈವ ಹಾಗೂ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರದ ರಚನೆ ವಿಚಾರವಾಗಿ ಮಾತನಾಡಿ, ಮುಂದುವರಿದ ಜನಾಂಗವನ್ನು ಹಿಂದುಳಿದ ವರ್ಗಕ್ಕೆ ಸೇರಿಸುವುದಕ್ಕೆ ಶಿಫಾರಸು ಮಾಡಿದ್ರೆ ನಮ್ಮ ಬದ್ಧತೆಯೇನು ಎಂದು ಪ್ರಶ್ನಿಸಿದರು. ನಿಗಮ ಮಂಡಳಿ ಮಾಡುವುದರಿಂದ ತಪ್ಪು ಎನಿಸಲಿಲ್ಲ. ಆದರೆ, ಸಣ್ಣ ಸಣ್ಣ ಸಮುದಾಯಗಳಿಗೆ ಅನ್ಯಾಯವಾಗಲಿದೆ. ಸರ್ವರಿಗೂ ಕಾರ್ಯಕ್ರಮ ಕೊಡಬೇಕು. ಈ ವಿಚಾರದಲ್ಲಿ ತಾರತಮ್ಯ ಬೇಡ, ಅಲ್ಪಸಂಖ್ಯಾತರಿಗೆ ನಿಗಮ ಇದೆ. ಆದರೆ, ಮೀಸಲಾತಿ ಶೇ.4ರಷ್ಟಿದೆ. ಇದರ ಸೌಲಭ್ಯ ಪಡೆಯಲು ಕಷ್ಟವಾಗುತ್ತಿದೆ ಎಂದರು.