ಸಾರ್ವಜನಿಕರಿಂದಲೇ ನಡೆಯಿತು ಕೋಟಿ ರಾಜಣ್ಣನ ಅಂತ್ಯಕ್ರಿಯೆ
ಮೃತದೇಹವನ್ನು ಪಡೆಯಲು ಬಾರದ ಸಂಬಂಧಿಕರು
ಮಡಿಕೇರಿ, ನ.28 : ಕೆಲವು ದಿನಗಳ ಹಿಂದೆ ಮಡಿಕೇರಿಯ ಬ್ರಾಹ್ಮಣರ ಬೀದಿಯಲ್ಲಿ ಅನಾರೋಗ್ಯದಿಂದ ಮೃತಪಟ್ಟ ಕೋಟಿ ರಾಜಣ್ಣ ಅವರ ಅಂತ್ಯಕ್ರಿಯೆಯನ್ನು ಅವರಿಗೆ ಆತ್ಮೀಯರಾಗಿದ್ದ ಸ್ನೇಹಿತರೇ ನೆರವೇರಿಸಿದರು.
ಒಂದು ಕಾಲದಲ್ಲಿ ಉತ್ತಮ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದ ರಾಜಣ್ಣ ಅವರು ಇತ್ತೀಚೆಗೆ ಆರ್ಥಿಕ ಹಿನ್ನಡೆಯಿಂದ ಸಂಕಷ್ಟದ ಜೀವನ ಸಾಗಿಸುತ್ತಿದ್ದರು. ರಾಜಣ್ಣ ಅವರ ಮೃತದೇಹವನ್ನು ಪಡೆಯಲು ಸಂಬಂಧಿಕರು ಯಾರೂ ಮುಂದೆ ಬಾರದ ಹಿನ್ನೆಲೆ ಕೊಹಿನೂರ್ ರಸ್ತೆಯ ಸ್ನೇಹಿತರು ಸೇರಿದಂತೆ ಸಂಘ, ಸಂಸ್ಥೆಗಳ ಪ್ರಮುಖರು ಅಂತ್ಯ ಸಂಸ್ಕಾರ ನೆರವೇರಿಸಿದರು.
ಕಳೆದ 4 ದಿನಗಳಿಂದ ಮಡಿಕೇರಿಯ ಶವಾಗಾರದಲ್ಲೇ ಇದ್ದ ಮೃತದೇಹವನ್ನು ಪೊಲೀಸರ ಅನುಮತಿ ಮೇರೆಗೆ ಹಿಂದೂ ರುದ್ರಭೂಮಿಗೆ ಕೊಂಡೊಯ್ದ “ಮೈ ಟೈಸನ್” ಚಿಕನ್ ಸ್ಟಾಲ್ನ ಮಹಮ್ಮದ್ ಹನೀಫ್, ಪ್ರಮುಖರಾದ ಪ್ರಭು ರೈ, ಸತೀಶ್ ಪೈ, ಪ್ರಕಾಶ್ ಆಚಾರ್ಯ, ಕನ್ನಿಕೆ, ರವಿಗೌಡ, ಡ್ಯೂಕ್. ಜಗದೀಶ್, ನಗರ ಠಾಣಾ ಪೊಲೀಸ್ ಸಿಬ್ಬಂದಿಗಳಾದ ಹೊನ್ನಪ್ಪ, ಅರುಣ್ ಹಾಗೂ ನಗರಸಭಾ ಸಿಬ್ಬಂದಿಗಳು ಅಂತ್ಯಕ್ರಿಯೆ ನೆರವೇರಿಸಿದರು.
Next Story