ರೈತ ಚಳವಳಿ ಬೆಂಬಲಿಸಿ ಡಿ.16ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಧರಣಿ: ಕುರುಬೂರು ಶಾಂತಕುಮಾರ್
ಮೈಸೂರು,ಡಿ.15: ದಿಲ್ಲಿಯಲ್ಲಿ ರೈತರು ನಡೆಸುತ್ತಿರುವ ಚಳುವಳಿಯನ್ನು ಬೆಂಬಲಿಸಲು ಕರ್ನಾಟಕದ ರೈತರ ಪರವಾಗಿ ರೈತ ದಲಿತ ಕಾರ್ಮಿಕ ಐಕ್ಯ ಹೋರಾಟದಿಂದ ಬೆಂಗಳೂರಿನ ಮೌರ್ಯ ವೃತ್ತದ ಬಳಿ ಇರುವ ಮಹಾತ್ಮ ಗಾಂಧಿ ಪ್ರತಿಮೆಯ ಮುಂದೆ ಡಿ.16 ರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ನಗರದ ಗನ್ಹೌಸ್ ಬಳಿಯ ಉದ್ಯಾನವನದಲ್ಲಿ ಮಂಗಳವಾರ ರೈತರ ಸಭೆ ನಡೆಸಿ ಮಾತನಾಡಿದ ಅವರು, ದಿಲ್ಲಿಯಲ್ಲಿ ತಿಂಗಳುಗಳಿಂದ ಕೊರೆಯುವ ಚಳಿಯಲ್ಲಿ ರೈತರು ಹೋರಾಟ ನಡೆಸುತ್ತಿದ್ದರೂ ಹದಿನಾಲ್ಕು ಜನ ರೈತರು ಹೋರಾಟಕ್ಕಾಗಿ ಪ್ರಾಣ ತೆತ್ತಿದ್ದರೂ ಕೇಂದ್ರ ಸರ್ಕಾರ ಸಮಸ್ಯೆ ಬಗೆಹರಿಸದೆ, ವಿಳಂಬ ಮಾಡುವ ಮೂಲಕ ಚಳುವಳಿ ದಿಕ್ಕು ತಪ್ಪಿಸಲು ಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಹಿತಕ್ಕಾಗಿ ಕಾಯ್ದೆ ಜಾರಿಗೆ ತರಲಾಗಿದೆ ಎನ್ನುತ್ತಾರೆ. ಆದರೆ ರೈತರ ಹೋರಾಟ ತೀವ್ರವಾಗುತ್ತಿದ್ದಂತೆ ತಿದ್ದುಪಡಿ ಮಾಡಲು ಮುಂದಾಗುತ್ತಾರೆ. ಇದರಿಂದಲೇ ತಿಳಿಯಬೇಕು ಕಾಯ್ದೆಯಲ್ಲಿ ಲೋಪ ದೋಷವಿದೆ ಎಂಬುದನ್ನು. ಕಲ್ಲಿದ್ದಲು ವಿಮಾನಯಾನ ರೈಲ್ವೆ ಟೆಲಿಕಾಂಗಳನ್ನು ಖಾಸಗಿ ವ್ಯವಸ್ಥೆಗೆ ಮಾರಲಾಗಿದೆ. ಈಗ ದೇಶದ ರೈತರನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಅದಕ್ಕಾಗಿಯೇ ದೇಶದ ರೈತರು ಜಾಗೃತರಾಗಿ ಬೀದಿಗಿಳಿದಿದ್ದಾರೆ. ವಿರೋಧ ಪಕ್ಷಗಳು ರೈತ ಹೋರಾಟವನ್ನು ಬೆಂಬಲಿಸಿದರೆ ಆಡಳಿತ ಪಕ್ಷಕ್ಕೆ ಆಗುವ ನಷ್ಟವೇನು ಎಂದು ಪ್ರಶ್ನಿಸಿದರು.
ಈ ಚಳುವಳಿಗೆ ರಾಜ್ಯದ ರೈತ ದಲಿತ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ ಅವರು, ಈ ಹೋರಾಟದಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಸರ್ಕಾರಗಳ ವೈಫಲ್ಯದಿಂದ ನಾವು ಚಳುವಳಿ ದಾರಿ ಹಿಡಿಯಬೇಕಾಗಿದೆ ಎಂದರು.
ಸಭೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್ ಜಿಲ್ಲ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರ್ ಶಂಕರ, ರಾಜಣ್ಣ, ಅಂಕಪ್ಪ, ಪರಶಿವಮೂರ್ತಿ ಮಹಿಳಾ ಸಂಚಾಲಕಿ ರಾಣಿ, ಬರಡನಪುರ ನಾಗರಾಜ್, ಆಡ್ಯರವಿ, ಪ್ರಸಾದ್ ನಾಯಕ್ ಮಂಜುನಾಥ್, ಕೆ ಜಿ ಎಸ್ ಗುರುಸ್ವಾಮಿ, ರಾಮೇಗೌಡ, ಕೃಷ್ಣೆಗೌಡ, ರಾಜು ಹೆಗ್ಗೂರ್ ರಂಗರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.