ವಿಧಾನ ಪರಿಷತ್ ಗದ್ದಲಕ್ಕೆ ಮೂರೂ ಪಕ್ಷಗಳು ಹೊಣೆ: ವೆಲ್ಫೇರ್ ಪಾರ್ಟಿ
ಬೆಂಗಳೂರು, ಡಿ.15: ವಿಧಾನ ಪರಿಷತ್ನಲ್ಲಿ ನಡೆದ ಗದ್ದಲದ ಹೊಣೆಯನ್ನು ಮೂರು ಪಕ್ಷಗಳು ಹೊರಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹಿರ್ ಹುಸೇನ್ ಹೇಳಿದ್ದಾರೆ.
ವಿಧಾನ ಪರಿಷತ್ನಲ್ಲಿ ಇಂದು ನಡೆದ ಘಟನೆಗಳು ಹಿರಿಯ ಸದನಕ್ಕೆ ಅಗೌರವ ತರುವಂತದ್ದಾಗಿದೆ. ಮಾತಿನ ಮನೆಯಲ್ಲಿ ಬಲ ಪ್ರಯೋಗದ ಘಟನೆಯಿಂದ ದೇಶಕ್ಕೆ ತಪ್ಪು ಸಂದೇಶ ಹೋಗಿದೆ. ಪ್ರಜಾಪ್ರಭುತ್ವದಲ್ಲಿ ಈ ಘಟನೆ ಆಗಬಾರದಿತ್ತು ಎಂದು ಅವರು ವಿಷಾದಿಸಿದ್ದಾರೆ.
ಈ ಘಟನೆ ಬಗ್ಗೆ ಯಾವುದೇ ಒಂದು ಪಕ್ಷ ಹೊಣೆಯಲ್ಲ. ಮೂರು ಪಕ್ಷದವರು ಹೊಣೆ ಹೊರಬೇಕಿದೆ. ಕರ್ನಾಟಕದ ಇತಿಹಾಸದಲ್ಲಿ ಇಂದು ಕಪ್ಪು ಚುಕ್ಕೆಯಾಗಿದೆ. ಇದೇ ಮೊದಲ ಬಾರಿಗೆ ರಾಜ್ಯದ ಇತಿಹಾಸದಲ್ಲಿ ದೇಶದ ಎದುರು ರಾಜ್ಯದ ಮಾನ ಹರಾಜಾಗಿದೆ. ಕಾರಣ, ವಿಧಾನ ಪರಿಷತ್ ಸಭಾಪತಿ ವಿರುದ್ಧ ಹಕ್ಕುಚ್ಯುತಿಯ ವೇಳೆ, ನಡಾವಳಿ ಮೀರಿ, ಬಿಜೆಪಿ-ಕಾಂಗ್ರೆಸ್ ಸದಸ್ಯರು ಕಿತ್ತಾಡಿರುವುದು ಅಸಂವಿಧಾನಿಕವಾಗಿದೆ. ಈ ಘಟನೆಗೆ ಮೂರೂ ಪಕ್ಷಗಳು ಹೊಣೆ ಹೊರಬೇಕು. ಬರುವ ದಿನಗಳಲ್ಲಿ ಸಂವಿಧಾನಕ್ಕೆ ಧಕ್ಕೆ ತರುವಂತಹ ಕೆಲಸ ಆಗಬಾರದು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.