ಸ್ಯಾಂಡಲ್ ವುಡ್ ಸಿನಿಮಾ ನಿರ್ಮಾಪಕ ಕೆ.ಮಂಜು ವಿರುದ್ಧ ಎಫ್ಐಆರ್
ಬೆಂಗಳೂರು, ಡಿ.25: ಹಣ ಪಡೆದು ವಂಚನೆ ಮಾಡಿರುವ ದೂರಿನ ಸಂಬಂಧ ಸ್ಯಾಂಡಲ್ ವುಡ್ ನಿರ್ಮಾಪಕ ಕೆ.ಮಂಜು ವಿರುದ್ಧ ಇಲ್ಲಿನ ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
‘ಹೆಬ್ಬೆಟ್ ರಾಮಕ್ಕ' ಚಿತ್ರದ ನಿರ್ಮಾಪಕ ಪುಟ್ಟರಾಜು ನೀಡಿರುವ ದೂರಿನನ್ವಯ ಕೆ.ಮಂಜು ವಿರುದ್ಧ ಐಪಿಸಿ ಸೆಕ್ಷನ್ 420, 506 ಮತ್ತು 34 ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಎಫ್ಐಆರ್ ನಲ್ಲಿ ಮಂಜು ಅವರನ್ನು ಎರಡನೇ ಆರೋಪಿಯಾಗಿ ದಾಖಲಿಸಲಾಗಿದೆ. ರಾಜ್ಗೋಪಾಲ್ ಬಿ.ಎಂ, ರಮೇಶ್ ಬಾಬು, ವಿಜಯಲಕ್ಷ್ಮಿ ಎಂಬುವವರು ಪ್ರಮುಖ ಆರೋಪಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.
ಏನಿದು ಆರೋಪ?: 2018ರಲ್ಲಿ ಆರೋಪಿ ರಾಜಗೋಪಾಲ್ ಹೊಸಕೋಟೆ ತಾಲೂಕಿನ ಸೊಣ್ಣೇನಹಳ್ಳಿಯಲ್ಲಿರುವ ತಮ್ಮ ಸರ್ವೆ ನಂ 7/3 ರ 18. 3/4 ಗುಂಟೆ ಜಮೀನನ್ನು ಮಾರಾಟ ಮಾಡಿದ್ದರು. ಆರ್ಟಿಜಿಎಸ್ನಲ್ಲಿ ದೂರುದಾರ ಪುಟ್ಟರಾಜು ಮೊದಲು ರಾಜಗೋಪಾಲ್ಗೆ ಮುಂಗಡ ನೀಡಿದ್ದರು. ಆದರೆ ಅಷ್ಟರಲ್ಲಿ ಕೆ.ಮಂಜು ತಾನು ಅದೇ ಜಾಗವನ್ನು ಪಡೆದುಕೊಂಡಿದ್ದಾರೆ. ಬಳಿಕ ಈ ನಾಲ್ಕು ಮಂದಿ ಸೇರಿ ನೋಂದಣಿ ಮಾಡಿಕೊಡುವುದಾಗಿ ಪುಟ್ಟರಾಜು ಬಳಿಯಿಂದ ಹಣ ಪಡೆದು ನಿರ್ಮಾಪಕ ಮಂಜು ಅವರ ಹೆಸರಿಗೆ ಜಮೀನು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.
ಆದರೆ 2018ರಲ್ಲಿ ಹಣ ಪಡೆದಿದ್ದರೂ ನನಗೆ ವಾಪಸ್ ನೀಡದೇ ವಂಚನೆ ಮಾಡಿರುವ ಕಾರಣ ಹಣದ ಬಗ್ಗೆ ಮಾತನಾಡಲು ಪುಟ್ಟರಾಜು ತೆರಳಿದ್ದಾರೆ. ಈ ವೇಳೆ ನನಗೆ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಎಸ್.ಎ. ಪುಟ್ಟರಾಜು ದೂರಿನಲ್ಲಿ ಉಲ್ಲೇಖಿಸಿದ್ದಾರೆ.