ಇನ್ನೂ ಎಷ್ಟು ಜನರ ರಕ್ತ ಹೀರುವಿರಿ?: ರಾಜ್ಯ ಬಿಜೆಪಿ ವಿರುದ್ಧ ಕಾಂಗ್ರೆಸ್ ಆಕ್ರೋಶ
ಬೆಂಗಳೂರು, ಡಿ.30: ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರ್ ಭಾರತ್ ಎನ್ನುವುದು ಘೋಷಣೆಗಳೇ ಹೊರತು ಕಾರ್ಯರೂಪದ್ದಲ್ಲ. ಸರಕಾರದ ಅಸಾಮರ್ಥ್ಯದಿಂದ ಟೊಯೊಟೋ ಬಿಕ್ಕಟ್ಟು ಪರಿಹಾರವಾಗದೆ ಕಾರ್ಮಿಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ತಪತ್ರ ಬರೆದಿದ್ದಾರೆ. ಬಿಜೆಪಿಯ ಅಯೋಗ್ಯತನದಿಂದ ಇರುವ ಉದ್ಯೋಗಗಳೂ ನಷ್ಟವಾಗುತ್ತಿವೆ. ರಾಜ್ಯ ಬಿಜೆಪಿ ಇನ್ನೂ ಎಷ್ಟು ಜನರ ರಕ್ತ ಹೀರುವಿರಿ? ಎಂದು ಕಾಂಗ್ರೆಸ್ ಟ್ವೀಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯ ಬಿಜೆಪಿ ಸರಕಾರ ಅಕ್ಷರಶಃ ಸರ್ವಾಧಿಕಾರಿ ನೀತಿ ಅನುಸರಿಸುತ್ತಿದೆ, ಬೇಡಿಕೆಗಳಿಗಾಗಿ ಪ್ರತಿಭಟಿಸಿದ್ದ ಸಾರಿಗೆ ನೌಕರರಿಗೆ ಒಂದಿಲ್ಲೊಂದು ಕಿರುಕುಳ ನೀಡಿ, ವಜಾ ಮಾಡುವ ಮೂಲಕ ಸೇಡಿನ ರಾಜಕಾರಣಕ್ಕೆ ಇಳಿದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ, ಸರಕಾರವೊಂದು ಈ ರೀತಿ ಸೈಕೋಪಾತ್ಗಳಂತೆ ವರ್ತಿಸುವುದು ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್ ಟೀಕಿಸಿದೆ.
ರಾಜ್ಯ ಬಿಜೆಪಿ ಜಪಿಸುತ್ತಿದ್ದ ‘ಯುಪಿ ಮಾಡೆಲ್’ ಇದೇನಾ? ನರೇಂದ್ರ ಮೋದಿ ಅವರೊಂದಿಗೆ ಕೆಲಸ ಮಾಡಿದವರೂ ಸೇರಿದಂತೆ 104 ಮಾಜಿ ಐಎಎಸ್ ಅಧಿಕಾರಿಗಳು ಯುಪಿ ಸರಕಾರ ಸಂವಿಧಾನ ವಿರೋಧಿಯಾಗಿ, ವಿಭಜನೆಯ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶಕ್ಕೆ ಕರ್ನಾಟಕವೇ ಮಾಡೆಲ್ ಆಗಿರುವಾಗ ಇಂತಹ ಅನಿಷ್ಟ ಮಾಡೆಲ್ ನಿಮಗೆ ಬೇಕೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.