ಚಿರತೆ ದಾಳಿಯಿಂದ ಯುವಕ ಮೃತ್ಯು: ಗ್ರಾಮಸ್ಥರಿಂದ ಪ್ರತಿಭಟನೆ
ಮೃತ ಯುವಕನ ಮನೆಗೆ ಸಚಿವ ಆನಂದ್ಸಿಂಗ್ ಭೇಟಿ; 10 ಲಕ್ಷ ರೂ. ಪರಿಹಾರ ಘೋಷಣೆ
ಗಂಗಾವತಿ: ಕರಿಯಮ್ಮನಗಡ್ಡಿ ಹಾಗೂ ಸುತ್ತಲಿನ ಗ್ರಾಮಸ್ಥರು ತಾಲೂಕಿನ ವಿರೂಪಾಪೂರಗಡ್ಡಿಯಲ್ಲಿ ಚಿರತೆ ದಾಳಿಯಲ್ಲಿ ಮೃತಪಟ್ಟ ಯುವಕನ ಶವ ಸಂಸ್ಕಾರ ಮಾಡದೆ ಅರಣ್ಯ ಸಚಿವರು ಬರುವ ತನಕ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಸಾಣಾಪೂರ ಗ್ರಾಮದಲ್ಲಿ ನಡೆದಿದೆ.
ಚಿರತೆ ದಾಳಿಯಲ್ಲಿ ಮೃತಪಟ್ಟ ಯುವಕನ ಶವಸಂಸ್ಕಾರ ಮಾಡಲು ಒಪ್ಪದ ಗ್ರಾಮಸ್ಥರು ಗಂಗಾವತಿ ಮುನಿರಾಬಾದ ರಸ್ತೆಯನ್ನು ಇಡೀ ದಿನ ಬಂದ್ ಪ್ರತಿಭಟನೆ ನಡೆಸಿದರು.
ಸಂದರ್ಭದಲ್ಲಿ ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ್ ಹಾಗೂ ಜಿಲ್ಲಾಡಳಿತ ಪ್ರತಿಭಟನೆ ನಿರತರ ಮನವೊಲಿಸಿ ಪ್ರತಿಭಟನೆ ನಿಲ್ಲಿಸಿದರು. ಗ್ರಾಮಸ್ಥರ ಒತ್ತಾಯಕ್ಕೆ ಮಣಿದ ಸಚಿವ ಆನಂದ್ ಸಿಂಗ್ ಪೊಲೀಸರ ಬಿಗಿಬಂದೋಬಸ್ತಿನಲ್ಲಿ ಕರಿಯಮ್ಮನಗಡ್ಡಿಗೆ ಆಗಮಿಸಿ ಮೃತನ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ನಂತರ ಸರಕಾರದಿಂದ 7.5 ಲಕ್ಷ ಹಾಗೂ ವೈಯಕ್ತಿಕವಾಗಿ 2.5 ಲಕ್ಷ ಸೇರಿಸಿ ಒಟ್ಟು10 ಲಕ್ಷ ರೂ ಪರಿಹಾರ ಘೋಷಣೆ ಮಾಡಿದರು.
"ಚಿರತೆ ದಾಳಿಯಿಂದ ಜನರು ಭಯಭೀತರಾಗಿದ್ದಾರೆ. ಸರಕಾರ ತಜ್ಞರ ಜೊತೆ ಚರ್ಚೆ ಮಾಡಿ ಶೀಘ್ರವೇ ಚಿರತೆ ಸೆರೆ ಹಿಡಿಯಲಾಗುತ್ತದೆ" ಎಂದರು.
ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ,ಮಾಜಿ ಸಚಿವ ಶ್ರೀರಂಗದೇವರಾಯಲು,ಮಾಜಿ ಎಂಎಲ್ಸಿ ಎಚ್. ಆರ್.ಶ್ರೀನಾಥ್, ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ ಕಿಶೋರ್, ಎಸಿ ಎನ್ ಕನಕರೆಡ್ಡಿ ಸೇರಿದಂತೆ ಸ್ಥಳದಲ್ಲಿದ್ದರು.