ಕೃಷಿ ಮಸೂದೆ ವಿರೋಧಿಸಿ ರೈತರ ಪ್ರತಿಭಟನೆ: ರಿಲಯನ್ಸ್ ಉತ್ಪನ್ನಗಳ ದಹನ
ಮಂಡ್ಯ, ಜ.6: ರೈತ ವಿರೋಧಿ ಕೃಷಿ ಮಸೂದೆಗಳನ್ನು ಹಿಂಪಡೆಯಲು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಬುಧವಾರ ನಗರದ ಕಾವೇರಿ ಉದ್ಯಾನವನದ ಬಳಿ ಪ್ರತಿಭಟನೆ ನಡೆಸಿದರು.
ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರ ಹಾಗೂ ರಿಲಿಯನ್ಸ್ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ರಿಲಯನ್ಸ್ ಟ್ರೆಂಡ್ ಬಳಿಗೆ ತೆರಳಿ ಮಸೂದೆ ಪ್ರತಿ ಹಾಗೂ ರಿಲಯನ್ಸ್ ಉತ್ಪನ್ನಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರದ ಬಿಜೆಪಿ ಸರಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳು ಹಾಗೂ ರಾಜ್ಯದ ಭೂ ಸುಧಾರಣಾ ತಿದ್ದುಪಡಿ ಮತ್ತು ಗೋ ನಿಷೇಧ ಕಾಯ್ದೆಗಳು ರೈತ, ಕೃಷಿ ಕಾರ್ಮಿಕರ ವಿರೋಧಿಗಳಾಗಿವೆ ಎಂದು ಅವರು ಆರೋಪಿಸಿದರು.
ಕೃಷಿ ಕ್ಷೇತ್ರವನ್ನು ಕಾರ್ಪೋರೇಟ್ ಕಂಪನಿಗಳಿಗೆ ಒಪ್ಪಿಸಿ ರೈತರನ್ನು ಸರ್ವನಾಶ ಮಾಡಲು ಕೇಂದ್ರ ಸರಕಾರ ಹೊರಟಿದೆ. ಈ ಕಾಯ್ದೆಗಳಿಂದ ರೈತರು ಮತ್ತು ಕಾರ್ಮಿಕರು ಬೀದಿಪಾಲಾಗಲಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಮಸೂದೆಗಳ ವಿರುದ್ಧ ಸುಮಾರು ಒಂದೂವರೆ ತಿಂಗಳಿಂದ ಪಂಜಾಬ್, ಹರಿಯಾಣ ರೈತರು ದೆಹಲಿಯ ಕೊರೆಯುವ ಚಳಿಯಲ್ಲಿ ಚಳವಳಿ ಮಾಡುತ್ತಿದ್ದಾರೆ. ಜತೆಗೆ ದೇಶ ವ್ಯಾಪ್ತಿ ಪ್ರತಿಭಟನೆಗಳು ನಡೆದಿವೆ. ಆದರೂ, ಸರಕಾರ ನಿರ್ಲಕ್ಷಿಸಿದೆ ಎಂದು ಅವರು ಕಿಡಿಕಾರಿದರು.
ಪ್ರಧಾನಿ ನರೇಂದ್ರಮೋದಿ ಕೇವಲ ಭಾಷಣಗಳಲ್ಲಿ ರೈತರ ಪರ ಮಾತನಾಡುತ್ತಾರೆ. ಆದರೆ, ಅವರ ಕಾಳಜಿ ಇರುವುದು ಅಂಬಾನಿ, ಅದಾನಿಯಂತಹ ಕಾರ್ಪೋರೇಟ್ ಕುಳಗಳ ಪರ ಎಂಬುದು ಅವರ ನಡವಳಿಕೆಯಿಂದ ಸಾಬೀತಾಗಿದೆ ಎಂದು ಅವರು ದೂರಿದರು.
ಕೂಡಲೇ ರೈತ ವಿರೋಧಿ ಕೃಷಿ ಮಸೂದೆಗಳನ್ನು ಹಿಂಪಡೆಯಬೇಕು. ಇದಲ್ಲದೆ ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನೂ ಕೈಬಿಡಬೇಕು. ಸಾರ್ವಜನಿಕ ಕ್ಷೇತ್ರದ ಉದ್ಯಮಗಳ ಖಾಸಗೀಕರಣ ನಿಲ್ಲಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಲಿಂಗಪ್ಪಾಜಿ, ಲತಾಶಂಕರ್, ರವಿಕುಮಾರ್, ಚಂದ್ರು, ಪ್ರಸನ್ನಗೌಡ, ನಾಗಣ್ಣ, ಲಿಂಗರಾಜಮ್ಮ, ಹರೀಶ್, ಕೀಲಾ ಸೋಮಶೇಖರ್, ನಾಗಣ್ಣ, ಕೀಳಘಟ್ಟ ನಂಜುಂಡಯ್ಯ, ಹುರಗಲವಾಡಿ ಉಮೇಶ್, ಮರಳಿಗ ಚನ್ನಪ್ಪ, ಇತರ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.