ಬಿಜೆಪಿ ಎಂದರೆ ಬ್ಲ್ಯಾಕ್ಮೇಲರ್ಸ್ ಜನತಾ ಪಾರ್ಟಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ
ಬೆಂಗಳೂರು, ಜ. 14: ‘ಬಿಜೆಪಿ ಎಂದರೆ ಬ್ಲ್ಯಾಕ್ಮೇಲರ್ಸ್ ಜನತಾ ಪಕ್ಷ. ಹಾಗೆಂದು ಆ ಪಕ್ಷದ ನಾಯಕರೇ ಹೇಳಿಕೊಂಡಿದ್ದಾರೆ. ಸಂಪುಟ ವಿಸ್ತರಣೆ ವಿಚಾರದಲ್ಲಿ ಬ್ಲ್ಯಾಕ್ಮೇಲ್, ಲಂಚದ ಆರೋಪ ಕೇಳಿ ಬಂದಿದ್ದು ಸಿಎಂ ಯಡಿಯೂರಪ್ಪ ನೈತಿಕ ಹೊಣೆ ಹೊರಬೇಕಿದೆ. ಈ ಬಗ್ಗೆ ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ಗುರುವಾರ ಇಲ್ಲಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಯಡಿಯೂರಪ್ಪನವರೇ ನಿನ್ನೆ ಸಂಪುಟ ವಿಸ್ತರಣೆ ಮಾಡಿದ್ದೀರ. ನೀವು ಯಾರನ್ನ ಬೇಕಾದರೂ ಮಾಡಿಕೊಳ್ಳಿ. ನಮ್ಮದು ಯಾವ ಅಭ್ಯಂತರವೂ ಇಲ್ಲ. ನಿಮ್ಮವರೇ ಬ್ಲ್ಯಾಕ್ ಮೇಲರ್ಸ್ ಸಂಪುಟ ಎಂದಿದ್ದಾರೆ. ನಿಮ್ಮ ಸಿಡಿಯ ಬಗ್ಗೆಯೂ ಮಾತನಾಡಿದ್ದಾರೆ.
ಬ್ಲ್ಯಾಕ್ ಮೇಲರ್ ಗಳು, ಲಂಚ ನೀಡಿರುವವರು ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆಂದು ನಿಮ್ಮದೇ ಪಕ್ಷದ ಕೇಂದ್ರ ಹಾಗೂ ರಾಜ್ಯದ ಮಾಜಿ ಸಚಿವರು, ಶಾಸಕರು ಹೇಳಿಕೆ ಕೊಟ್ಟಿದ್ದಾರೆ. ನೀವು ಲಂಚ ಪಡೆದಿದ್ದೀರಿ ಎಂಬ ಮಾತುಗಳು ಕೇಳಿ ಬಂದಿವೆ. ಇದ್ಯಾವುದೂ ನನ್ನ ಹೇಳಿಕೆಯಲ್ಲ. ಇದೆಲ್ಲವೂ ಬಿಜೆಪಿ ಧ್ವನಿ. ಸಿಡಿಯಲ್ಲಿ ಏನಿದೆ ಎಂಬುದು ಅದನ್ನು ನೋಡಿ, ಚರ್ಚೆ ಮಾಡಿರುವ ಬಿಜೆಪಿಯವರಿಗೆ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಕಾರವಾರದಲ್ಲೇ ಸಿಡಿ ಬಗ್ಗೆ ಹೇಳಿಕೆ ಕೊಟ್ಟಿದ್ದೆ. ಅದನ್ನ ತೆಗೆದಿಡಿ ಅಂತ ಗೃಹ ಸಚಿವರು ಹೇಳಿದ್ದರು. ಈಗ ನಿಮ್ಮವರೇ ತೆಗೆದಿಡುತ್ತಿದ್ದಾರೆ ನೋಡಿ. ಬಿಜೆಪಿಯವರೇ ಸಿಡಿ ಮತ್ತು ಲಂಚದ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಇದು ಐಪಿಸಿ ಅಪರಾಧ ಆಗುತ್ತದೆ. ಸಿಡಿ ಒಳಗೆ ಏನಿದೆ ಎಂಬುದು ನಿಮ್ಮವರಿಗೇ ಗೊತ್ತಿದೆ. ಇದರ ಜತೆ ಲಂಚದ ಬಗ್ಗೆಯೂ ಮಾತನಾಡಿದ್ದಾರೆ. ಎಷ್ಟು ಲಂಚ ಕೊಟ್ಟಿದ್ದಾರೆ? ಮತ್ತೊಬ್ಬ ಸಚಿವರು ಅದೆಷ್ಟೋ ಖರ್ಚು ಮಾಡಿದ್ದಾರೆಂದು ಹೇಳಿಕೆ ಕೊಟ್ಟಿದ್ದಾರೆ. ಇದೆಲ್ಲದಕ್ಕೂ ಉತ್ತರ ಸಿಗಬೇಕಲ್ಲವೇ? ಎಂದು ಶಿವಕುಮಾರ್ ಆಗ್ರಹಿಸಿದರು.
ಇಡಿ ಏನು ಮಾಡ್ತಿದೆ: ರಾಜ್ಯದಲ್ಲಿ ಇಷ್ಟೆಲ್ಲಾ ಆಗುತ್ತಿದ್ದರೂ ಇಡಿ, ಐಟಿ, ಎಸಿಬಿ ಏನು ಮಾಡುತ್ತಿವೆ ? ಈ ಸಂಸ್ಥೆಗಳು ಯಾಕೆ ಸುಮ್ಮನಿವೆ? ಇವರೆಲ್ಲರೂ ಸುಮೋಟೋ ಕೇಸ್ ಯಾಕೆ ದಾಖಲಿಸುತ್ತಿಲ್ಲ? ಎಂದು ಅವರು ಪ್ರಶ್ನಿಸಿದರು.
‘ಬ್ಲ್ಯಾಕ್ಮೇಲ್, ಲಂಚ ಆರೋಪದ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು. ಹೈಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಈ ತನಿಖೆ ನಡೆಯಬೇಕು. ಐಟಿ, ಇಡಿಯವರು ಸ್ವಯಂ ಪ್ರೇರಿತ (ಸುಮೋಟೋ) ಕೇಸ್ ದಾಖಲಿಸಬೇಕು. ಸಿಎಂ ಬಿಎಸ್ವೈ ಅವರೇ ನಿಮ್ಮ ನಾಯಕರೇ ಇಷ್ಟೆಲ್ಲಾ ಆರೋಪ ಮಾಡಿರುವಾಗ ನೀವು ನೈತಿಕ ಹೊಣೆ ಹೊರಬೇಕಿದೆ.'
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ