ರಾಜ್ಯ ರಾಜಕಾರಣಕ್ಕೆ ಶಾಕ್ ಕೊಡುವ ಸಿಡಿ ಸದ್ಯದಲ್ಲೇ ಬಿಡುಗಡೆ: ಎಚ್.ವಿಶ್ವನಾಥ್
ರಾಯಚೂರು, ಜ.14: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವ ಸಂಪುಟದ ವಿಸ್ತರಣೆಯಲ್ಲಿ ದಲ್ಲಾಳಿ, ಭ್ರಷ್ಟಾಚಾರಿ ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರ, ಸಾಮಾನ್ಯವಾಗಿ ಸಚಿವ ಸಂಪುಟ ವಿಸ್ತರಣೆ ಆಗುವಾಗ ಒತ್ತಡ ಇರುವುದು ಸಹಜ. ಆದರೆ, ಭ್ರಷ್ಟಾಚಾರವನ್ನೇ ಹೊದ್ದುಕೊಂಡು ಮಲಗಿರುವ ಸಿ.ಪಿ.ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹಲವರ ವಿರೋಧದ ನಡುವೆ ಸಮ್ಮಿಶ್ರ ಸರಕಾರವನ್ನು ಕೆಡವಿ, 17 ಮಂದಿ ಬಿಜೆಪಿಗೆ ಸೇರಿದ್ದೇವೆ. ಈ ವೇಳೆ ನಮಗೆ ನೀಡಿದ ಭರವಸೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈಡೇರಿಸದೆ ವಂಚನೆ ಮಾಡಿದ್ದಾರೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯ ರಾಜಕಾರಣಕ್ಕೆ ಶಾಕ್ ಕೊಡುವಂತಹ ಸಿಡಿಯೊಂದು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಅದನ್ನು ಯಾರು ಬಿಡುಗಡೆ ಮಾಡುತ್ತಾರೆಂಬುದು ಮುಂದೆ ಗೊತ್ತಾಗಲಿದೆ.
-ಎಚ್.ವಿಶ್ವನಾಥ್, ಮಾಜಿ ಸಚಿವ