ಅತೃಪ್ತರನ್ನು ಒಗ್ಗೂಡಿಸಲು ಯೋಗೇಶ್ವರ್ 9 ಕೋಟಿ ರೂ. ಸಾಲ ಮಾಡಿದ್ದರು: ರಮೇಶ್ ಜಾರಕಿಹೊಳಿ
ಬೆಳಗಾವಿ, ಜ.14: ಮೈತ್ರಿ ಸರಕಾರದ ಆಡಳಿತಾವಧಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿದ್ದ ಅತೃಪ್ತ ಶಾಸಕರನ್ನು ಒಗ್ಗೂಡಿಸಲು ಸಿ.ಪಿ.ಯೋಗೇಶ್ವರ್ ತಮ್ಮ ಮನೆಯನ್ನು ಅಡವಿಟ್ಟು 9 ಕೋಟಿ ರೂ.ಸಾಲ ಮಾಡಿದ್ದರು. ಅವರು ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿರುವುದು ಸಂತಸ ತಂದಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದಕ್ಕಾಗಿ ಅವರು ಎಂ.ಟಿ.ಬಿ.ನಾಗರಾಜ್ ಬಳಿಯೂ ಸಾಲ ಪಡೆದಿದ್ದರು. ನಮ್ಮನ್ನೆಲ್ಲ ಒಗ್ಗೂಡಿಸಲು ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಂಡಿದ್ದರು ಎಂದರು.
ಸಚಿವ ಸಂಪುಟಕ್ಕೆ ಯೋಗೇಶ್ವರ್ ಸೇರ್ಪಡೆ ಕುರಿತು ಸ್ವಪಕ್ಷೀಯ ಶಾಸಕರೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮನ್ನೆಲ್ಲ ಒಗ್ಗೂಡಿಸಲು ತಮ್ಮ ಆರೋಗ್ಯ ಹಾಳು ಮಾಡಿಕೊಂಡಿದ್ದರು. ಸಾಲ ಮಾಡಿ ರಾಜ್ಯದಲ್ಲಿ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರುವ ಅಗತ್ಯ ಯೋಗೇಶ್ವರ್ ಗೆ ಇತ್ತೇ? ಇವತ್ತು ಅವರ ವಿರುದ್ಧ ಮಾತನಾಡುವವರು, ಸರಕಾರ ಅಧಿಕಾರಕ್ಕೆ ತರಲು ಅವರು ಪ್ರಯತ್ನ ಪಡುತ್ತಿದ್ದ ವೇಳೆ ಎಲ್ಲಿದ್ದರು ಎಂದು ಪ್ರಶ್ನಿಸಿದರು.
ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಹಜವಾಗಿಯೆ ಅಸಮಾಧಾನಗಳು ಇರುತ್ತವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಈ ಸಂಬಂಧ ಕೈಗೊಂಡಿರುವ ನಿರ್ಣಯಕ್ಕೆ ನಮ್ಮ ಸಂಪೂರ್ಣ ಸಹಮತವಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ರಮೇಶ್ ಜಾರಕಿಹೊಳಿ ಭ್ರಷ್ಟರಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಿಶ್ವನಾಥ್ ಹಿರಿಯರು. ಅವರ ಮಾತುಗಳನ್ನು ನಾನು ಆಶೀರ್ವಾದದಂತೆ ಸ್ವೀಕರಿಸುತ್ತೇನೆ. ಅವರು ನೀಡಿರುವ ಹೇಳಿಕೆಗಳಿಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ಹೋರಾಟದ ಹಿನ್ನೆಲೆಯನ್ನು ಹೊಂದಿರುವ ವ್ಯಕ್ತಿ. ಇಂತಹ ಬ್ಲ್ಯಾಕ್ ಮೇಲ್ಗಳಿಗೆಲ್ಲ ಹೆದರುವ ವ್ಯಕ್ತಿಯಲ್ಲ. ಅದು ಯಾವ ಸಿ.ಡಿ ಇದೆಯೋ? ಇಲ್ಲವೋ? ನನಗೆ ಗೊತ್ತಿಲ್ಲ. ರಾಜಕಾರಣದಲ್ಲಿ ಇಂತಹ ಸಿ.ಡಿ.ಗಳು ಬರುತ್ತವೆ, ಹೋಗುತ್ತವೆ. ಆದರೆ, ಒಬ್ಬರ ವೈಯಕ್ತಿಕ ಜೀವನದಲ್ಲಿನ ಘಟನೆಗಳ ಬಗ್ಗೆ ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕೆ ಹೊರತು, ಅವರನ್ನು ಮತ್ತಷ್ಟು ಕುಗ್ಗಿಸುವ ಕೆಲಸವನ್ನು ಮಾಡಬಾರದು. ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಬಿಎಸ್ವೈ ಪರ: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಒಂದು ವೇಳೆ ಅಂತಹ ಪರಿಸ್ಥಿತಿ ನಿರ್ಮಾಣವಾದರೆ ನಾವು ಯಡಿಯೂರಪ್ಪ ಪರವಾಗಿ ಇರುತ್ತವೆ ಎಂದ ಅವರು, ಸಚಿವ ಸಂಪುಟದಿಂದ ಮುನಿರತ್ನ ಹಾಗೂ ಎಚ್.ನಾಗೇಶ್ ಹಿಂದುಳಿಯಲಿದ್ದಾರೆ ಎಂಬ ಕಲ್ಪನೆಯೂ ನನಗೆ ಇರಲಿಲ್ಲ. ನಮ್ಮೊಂದಿಗೆ ಬಿಜೆಪಿ ಸೇರಿರುವವರ ಪರವಾಗಿ ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುತ್ತೇವೆ. ಹಾದಿ ಬೀದಿಯಲ್ಲಿ ಚರ್ಚೆ ಮಾಡುವುದಿಲ್ಲ ಎಂದರು.