ಉದ್ಧವ್ ಠಾಕ್ರೆ ಹೇಳಿಕೆ ದೇಶದ್ರೋಹಿಗಳು ಮಾಡುವ ಕೆಲಸ: ಶಾಸಕ ತನ್ವೀರ್ ಸೇಠ್ ಆಕ್ರೋಶ
ಮೈಸೂರು,ಜ.18: ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಟ್ವೀಟ್ ಮಾಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಹೇಳಿಕೆ ದೇಶ ದ್ರೋಹಿಗಳು ಮಾಡುವ ಕೆಲಸ ಎಂದು ಶಾಸಕ ತನ್ವೀರ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾನತಾಡಿದ ಅವರು, ಏಕೀಕರಣದ ಬಳಿಕ ನಮ್ಮ ಒಂದಿಂಚೂ ಭೂಮಿ ಬೇರೆಯವರಿಗೆ ಕೊಡುವ ಪ್ರಶ್ನೆಯೇ ಇಲ್ಲ, ಅನಾವಶ್ಯಕ ಈ ರೀತಿ ಟ್ವೀಟ್ ಮಾಡೋದು ದೇಶದ್ರೋಹಿಗಳು ಮಾಡುವ ಕೆಲಸ. ಯಾವುದೇ ಕಾರಣಕ್ಕೂ ಬೆಳಗಾವಿಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಹರಿಹಾಯ್ದರು.
ಗಡಿಭಾಗಗಳ ಅಭಿವೃದ್ಧಿಗಾಗಿ ಸುವರ್ಣಸೌಧ ಕಟ್ಟಲಾಗಿದೆ. ಆದರೆ ಕಳೆದ ಮೂರು ವರ್ಷಗಳಿಂದ ಅಲ್ಲಿ ಅಧಿವೇಶನಗಳೇ ನಡೆದಿಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿ ಎಂಬುದು ಕೇವಲ ನೆಪ. ಇತ್ತೀಚೆಗೆ ಉತ್ತರ ಕರ್ನಾಟಕದ ಅಭಿವೃದ್ಧಿ ಕೇವಲ ರಾಜಕೀಯ ವಿಷಯವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಇದನ್ನೇ ಬಂಡವಾಳ ಮಾಡಿಕೊಂಡಿವೆ. ನಮ್ಮ ರಾಜ್ಯ, ನೆಲ, ಜಲ, ಭಾಷೆ ಮೇಲೆ ಅಭಿಮಾನ ಇರಬೇಕು. ಈ ವಿಚಾರದಲ್ಲಿ ಸ್ವಾಭಿಮಾನದಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.